Anitha Naresh Manchi

MyFreeCopyright.com Registered & Protected

Sunday, March 20, 2011

ಕಲ್ಲರಳುವ ಕಾಲ




ಕಡಲಲೆಯು ಮತ್ತೆ ಮತ್ತೆ 
 ಸೋಕಿ ಪುಳಕಿತಗೊಂಡು  ಪಿಸುಗುಟ್ಟಿದರೂ  
 ಮಾರ್ನುಡಿಯದ ಒರಟ....
ಹುಚ್ಚೆದ್ದ ಶರಧಿ 
ತನ್ನ ತೋಳೊಳಗೆ  ಬಂಧಿಸಿ ಆವರಿಸಿದರೂ  
ಜಾರಿಸಿ  ಸರಿಸಿ ಬೀರುವ ಒಣ ನೋಟ ....
ಅಲೆ ಒಂದಿಷ್ಟು ದೂರ ಸರಿದರೆ  ಸಾಕು
ಕಾವೇರಿದ ಬೆಳಕಿಗೆ ಮೈಯೊಡ್ಡಿ 
ಹಗುರಾಗುವ ನಿರ್ಧಯ ....
ಎಂದೆಲ್ಲ ಜರಿದರೂ 
ಕಲ್ಲು ಹೃದಯ 
ಕಾಯುತ್ತಲೇ ಇರುತ್ತದೆ.....
ಹನಿ ಹನಿ ಪ್ರೀತಿಯ ಸಿಂಚನಕ್ಕೆ ಒದ್ದೆಯಾಗಲು 
ಕನಸಲ್ಲೂ ಕನವರಿಸಿ 
ಮನದಲ್ಲೇ  ನುಡಿಯುತ್ತದೆ ಕಡಲಲೆಗೆ 
ಬಂದು ಬಿಡು ನನ್ನೊಡನೆ ಎಂದೂ ಮರಳದಂತೆ....

Thursday, March 3, 2011

* * ಯಕ್ಷ ಲೋಕ 

ಕಳಚಿಟ್ಟ  ನಿತ್ಯದ ವ್ಯಾವಹಾರಿಕ ಉಡುಪು  
ಬೇಕಿಲ್ಲ ಇನ್ನು ಕೊಂಚ ಹೊತ್ತದರ  ಗೊಡವೆ 
ಮುಖದ ವರ್ಣಿಕೆಗೆ ರೂಪುಗಳ ಆವಾಹಿಸಿ 
ಕುಣಿಯಬೇಕಿದೆ ಬಗೆ ಬಗೆಯ ಭಂಗಿಯಲಿ 
ನಿಮಿಷದಲಿ ರಾಜನೋ ರಾಣಿಯೋ 
ರಕ್ಕಸನೋ, ಖಳನೋ ವೇಷದೊಳಗೆ 
ಒಮ್ಮೆ ವೀರಾವೇಶ ಮಗದೊಮ್ಮೆ ಶೃಂಗಾರ 
ಕರುಣಾ, ರೌದ್ರ  ಶಾಂತಗಳ ಪರಿಮಳ 
ನಿಂತಲ್ಲೇ ಹೆಜ್ಜೆ ತಪ್ಪದೆ ಸುತ್ತಿದ ರಿಂಗಣ 
ನೋಟಕರಿಗೆ ಕುಳಿತಲ್ಲೇ ರೋಮಾಂಚನ 
ಪ್ರಕರ ಬೆಳಕಿಗೆ  ಹೊಳೆವ ದಿರಿಸ ಹೊತ್ತು 
ವ್ಯಕ್ತ ಪಡಿಸಿದ್ದಿಲ್ಲಿ ಬೇರೆಯದೇ ಲೋಕ 
ತೆಗೆದೆಸೆವ ಮಾತುಗಳು ಎದೆಯೊಳಗೆ ನಾಟಿ

ಹೌದು ಹೌದೆಂದು ಅರಸಿಕನನೂ ತಲೆದೂಗಿಸಿ 
ಕೃತಕ ದೀಪದ  ಬದುಕು ಕೊಂಚ ಹೊತ್ತಿನದಾದರು 
ಪ್ರತಿ ಕ್ಷಣವೂ ಬೇರೊಂದು ಪಾತ್ರದೊಳ  ಹೊಕ್ಕು 
ಬಳಲಿ ಬಸವಳಿದ ದೇಹವೂ ಹೊಸ ಜೀವವ ಪಡೆದು 
ಆನಂದದ ಅಲೆಗಳಲಿ ಮನ ಮನವ ತೋಯಿಸಿ 
ಸಾರ್ಥಕದ ಮಧುರ ಕ್ಷಣಗಳ ತನ್ನೊಳಗೂ ಜೀವಿಸಿ 
ಬೆಳಗಾಗುವುದರಲ್ಲಿ ಮತ್ತದೇ ಕಾಲಿ ಬಯಲು 
ಕತ್ತಲಲ್ಲಿ ಕಂಡ ಭವ್ಯತೆ ತೋರದಿದ್ದರೂ ಇಲ್ಲಿ
ಎದೆಯೊಳಗೆ ಉಳಿದ ಬಾವದ ಹಕ್ಕಿಯ ನಿರಂತರ ಚಿಲಿಪಿಲಿ 
ಬೇಕೆನಿಸುತ್ತದೆ ಇನ್ನೊಮ್ಮೆ ಮತ್ತೊಮ್ಮೆ 
ನೆನಪಿನೊಳಗೆ ಪವಡಿಸಿ ಮತ್ತೆ ಮತ್ತೆ ಮಾರ್ಧನಿಸಿ 


Friday, February 18, 2011

ಮನದಾಳ


ದಟ್ಟ ಕಾಡಿನ ನಡುವಿನ ಕತ್ತಲ ಹಾದಿ. ಕಾರಿನ ಹೆಡ್ ಲೈಟಿನ  ಬೆಳಕಿಗೆ ಬದಿಯ ಮರಗಳೆಲ್ಲ ಚಿತ್ರ ವಿಚಿತ್ರಾಕಾರ ತಾಳಿ ನಿಂತಂತೆ ಅನ್ನಿಸುತಿತ್ತು. ಕಾರು ನಿಧಾನ ಗತಿಯಲ್ಲಿ ಸಾಗುತಿತ್ತು. ಮುಂದುಗಡೆ ಸ್ವಲ್ಪ ಏರು ಹಾದಿಯಂತೆ ಕಂಡಿತು. ಡ್ರೈವರ್ ಸೀಟಿನಲ್ಲಿ ಕುಳಿತಿದ್ದ ರಾಯರು  ಯಾಕೋ ಆತಂಕಗೊಂಡಂತೆ ಕಂಡಿತು. ತಟ್ಟನೆ ಬದಿಯಿಂದ ಒಂದು ದೊಡ್ಡ ಚಿರತೆ ಬಂದು ಕಾರಿನ ಕಿಟಕಿಯ ಮೇಲೆ ಎರಡೂ ಕಾಲೂರಿ ಗರ್ಜಿಸಿತು. ರಾಯರ ಇಡೀ ಮೈ ಭಯದಿಂದ ನಡುಗಿ ಜೋರಾಗಿ ಕಿರುಚಲು ಬಾಯಿ ತೆರೆದರು. ಪಕ್ಕನೆ ಎಚ್ಚರವಾಯಿತು. ಹತ್ತಿರದಲ್ಲಿ ಮಲಗಿದ್ದ ಜಾನಕಮ್ಮ ರಾಯರನ್ನು ಅಲುಗಿಸಿ  "ಏನಾಯಿತು ರ್ರೀ .. ಯಾಕೋ ನರಳಿದಂತೆ ಕೇಳಿಸಿತು" ಎಂದರು. ರೂಮಿನಲ್ಲಿ  ಜೋರಾಗಿ ಫ್ಯಾನ್ ತಿರುಗುತ್ತಿದ್ದರೂ ರಾಯರ  ಮೈ ಬೆವೆತು ಒದ್ದೆಯಾಗಿತ್ತು. ಏನೂ ಮಾತನಾಡಲಾರದೆ ರಾಯರು " ಏನೂ ಇಲ್ಲ ಕಣೆ ಯಾಕೋ ಎಚ್ಚರವಾದಂತಾಯಿತಷ್ಟೇ ನೀನು ಮಲಗು" ಎಂದು ಮೆಲ್ಲನೆದ್ದು  ಬದಿಯಲ್ಲಿದ್ದ ನೀರ ಹೂಜಿಯಿಂದ ಗಟ ಗಟನೆ ನೀರು ಕುಡಿದರು .ಯಾಕೆ ಈ ಕನಸು  ದಿನಾಲೂ ನನ್ನ ಮನಶ್ಯಾಂತಿ ಹಾಳು ಮಾಡುತ್ತದೆ.. ನಿದ್ದೆ ಮಾಡುವುದೆಂದರೆ ಹೆದರಿಕೆ ಆಗುವಂತಾಗಿದೆ. ಯಾಕೋ ಯಾರೊಂದಿಗೂ ಇದನ್ನು ಹೇಳಿ ಕೊಳ್ಳಲು ಮುಜುಗರವೆನಿಸುತಿತ್ತು. ನಾಳೆಯೇ ಇದಕ್ಕೇನಾದರೂ ಪರಿಹಾರ ಹುಡುಕಿಯೇ ತೀರಬೇಕೆಂದು ಕೊಂಡರು. ರಿಟೈರ್ಡ್  ಆಗಿ ಕೆಲ ಕಾಲವಾಗಿತ್ತು. ಸಂಜೆ ವಾಕ್ ಮಾಡುತ್ತಾ ತಮ್ಮ ಮಕ್ಕಳ ಸುದ್ದಿ, ಮನೆ ಸುದ್ದಿ, ಕಾಯಿಲೆ ಕಸಾಲೆಗಳ ಸುದ್ದಿ ಇತ್ಯಾದಿಗಳನ್ನು ರಂಗು ರಂಗಾಗಿ ವರ್ಣನೆ ಮಾಡುತ್ತಾ ಎಲ್ಲಾ ಕಷ್ಟ ಸುಖ ಗಳನ್ನು ಹಂಚಿ ಕೊಳ್ಳುವ ಉತ್ತಮ ಸ್ನೇಹಿತರ ವರ್ಗ ರಾಯರ ಪಾಲಿಗಿತ್ತು.ಅವರ ಬಳಿ ಹೇಳುವುದೇ ಉತ್ತಮ ಎಂದು ಮನ ನುಡಿಯಿತು.  ಮತ್ತೆ ಯಾವಾಗ ನಿದ್ದೆ ಸುಳಿಯಿತೋ ತಿಳಿಯಲಿಲ್ಲ.ಪತ್ನಿ ಬಂದು ಇನ್ನೂ " ಮಲ್ಗೆ ಇದ್ದೀರಾ.. ಯಾಕೆ ಏನಾಯ್ತು" ಎಂದಾಗಲೇ ಎಚ್ಚರವಾಗಿದ್ದು. ಏನೊಂದೂ ಮಾತನಾಡದೆ ಮೆಲ್ಲನೆದ್ದು ಹೊರ ನಡೆದ ರಾಯರನ್ನು ಕಂಡು ಅವರ ಪತ್ನಿಗೆ ಯಾಕೋ ಕಸಿವಿಸಿಯಾಯಿತು. ಸದಾ ಬೇಕಿದ್ದರೂ, ಬೇಡದಿದ್ದರೂ ಮಾತನಾಡುತ್ತಿದ್ದ ರಾಯರ ಈ ಹೊಸ ರೂಪ ಮನೆಯ ಸದಸ್ಯರಿಗೆ ಆತಂಕ ತಂದಿತು. ಆದರೆ  ತಮ್ಮ  ಕನಸಿನ ಚಿಂತೆಯಲ್ಲೇ ಇನ್ನೂ ಮುಳುಗಿದ್ದ ರಾಯರಿಗೆ,  ಯಾಕೋ ಇಂದು ಬೇಗನೆ ಸಂಜೆಯೂ ಆಗುವುದಿಲ್ಲವೇನೋ ಎಂಬ ಭಯ  ಕಾಡ ತೊಡಗಿತು. ಎಷ್ಟು  ಬಾರಿ ಗಂಟೆ  ನೋಡಿದರೂ ಸಾಕಾಗಲಿಲ್ಲ. ಮೇಜಿನ ಮೇಲೆ ತಾವು ಓದಿ ಅರ್ಧಕ್ಕೆ ನಿಲ್ಲಿಸಿದ್ದ ಪುಸ್ತಕ ಕಣ್ಣಿಗೆ ಬಿತ್ತು. ಅದನ್ನೆತ್ತಿಕೊಂಡು ಓದ ತೊಡಗಿದರೂ  ಒಂದಕ್ಷರವೂ ತಲೆಯೊಳಗಿಳಿಯಲಿಲ್ಲ . ಕನಸಲ್ಲಿ ಮೃತ್ಯುವಾಗಿ ಕಾಡಿದ ಚಿರತೆಯ ಕೆಂಪನೆಯ ಕಣ್ಣುಗಳೇ ಅಕ್ಷರ ರೂಪದಲ್ಲಿ ಬಂದಂತಾಗಿ ಅದನ್ನೆತ್ತಿ ಪಕ್ಕಕ್ಕಿಟ್ಟರು. ಅಂತೂ ಇಂತೂ ಸಂಜೆ ನಾಲ್ಕು ಗಂಟೆ ಹೊಡೆಯುವುದು ಕೇಳಿದ ಕೂಡಲೇ ಕಾಲಿಗೆ ಷೂ ಏರಿಸಿ , "ಇವತ್ತು ಮೈಯಲ್ಲಿ ಆರಾಮಿಲ್ಲದಿದ್ರೆ ಹೊರಗ್ಯಾಕೆ ಹೋಗ್ತೀರಿ" ಎನ್ನುವ ಪತ್ನಿಯ ಮಾತುಗಳು ಕೇಳಿಸಲೇ ಇಲ್ಲವೇನೋ ಎಂಬಂತೆ ನಟಿಸಿ ವೇಗವಾಗಿ ಮನೆಯಿಂದ ಹೊರ ಬಿದ್ದರು.
 
ಅವರು ಯಾವಾಗಲೂ ಕೂರುತ್ತಿದ್ದ ಪಾರ್ಕಿನ ಬೆಂಚು ಕಾಲಿಯಾಗೆ ಇತ್ತು. ಇನ್ನೂ ಯಾರೂ ಬಂದಿರಲಿಲ್ಲ. ಪಾರ್ಕಿನಲ್ಲಿದ್ದ ಹಚ್ಚ ಹಸುರಿನ ಗಿಡ ಮರ ಬಳ್ಳಿಗಳು, ಕಂಪನ್ನು ಸೂಸುವ ಬಗೆ ಬಗೆಯ ಬಣ್ಣದ ಹೂವುಗಳು, ಸಂಜೆ ಹೊತ್ತಲ್ಲಿ ಎಲ್ಲಿಲ್ಲದ ಲವಲವಿಕೆಯಲ್ಲಿ ಚಿಲಿ ಪಿಲಿ ಗುಟ್ಟುವ ಬಾನಾಡಿಗಳು , ಹರ್ಷದಿಂದ ಕೇಕೆ ಹಾಕಿ ಆಡುವ ಚಿಣ್ಣರು ,ಇವೆಲ್ಲವೂ ಇಂದೇಕೋ ರಾಯರ ಮನಸ್ಸನ್ನು ಮುದಗೊಳಿಸಲಿಲ್ಲ. ಅಲ್ಲೇ ಆಚೆ  ಹೊರಗಿನ ರಸ್ತೆಯಲ್ಲಿ  ಕೀಲಿ  ಕೊಟ್ಟ ಆಟಿಕೆಗಳಂತೆ ಇತ್ತಿಂದತ್ತ  ಚಲಿಸುತ್ತಿದ್ದ  ವಾಹನಗಳು ರಾಯರ ಅಶಾಂತಿಯನ್ನು ಹೆಚ್ಚಿಸಿದವು. ಆ ವೇಳೆಯಲ್ಲಿ ಒಬ್ಬೊಬ್ಬರಾಗಿ ಬಂದು ಬೆಂಚು ಆಕ್ರಮಿಸಿದ ಸ್ನೇಹಿತರು ರಾಯರ ಅರಿವಿಗೆ ಬಂದದ್ದು ಅವರಲ್ಲೊಬ್ಬರು  ಬೆನ್ನು  ತಟ್ಟಿ " ಯಾಕೋ ಸುಮ್ನೆ ಮಂಕು ಬಡಿದಂಗೆ ಕೂತಿದ್ದೀಯ ಏನಾಯ್ತು" ಎಂದಾಗಲೇ. ತಿರುಗಿ ನೋಡಿದಾಗ  ಎಲ್ಲರೂ ಸೇರಿ ಆಗಿತ್ತು. ರಾಯರ  ದೃಷ್ಟಿ ಆತ್ಮೀಯರಾದ ಡಾಕ್ಟರ್ ಚೌಗಳೆ ಯವರ ಮೇಲಿತ್ತು. ಅವರು ಕಣ್ಣಲ್ಲೇ ಏನಾಯ್ತು ಎಂಬಂತೆ  ಮಿತ್ರನ ಕಡೆಗೆ ನೋಡಿದರು.ರಾಯರು ನಿಧಾನಕ್ಕೆ ತಮ್ಮ ಕನಸಿನ ಪ್ರವರ ಶುರು ಮಾಡಿದರು. ಅದರ ವರ್ಣನೆಯನ್ನೆಲ್ಲ ಮುಗಿಸಿ, ಪದೇ ಪದೇ ಬೀಳುತ್ತಿರುವ ಈ ಕನಸು ನನ್ನ ನಿತ್ಯದ ನಿದ್ರೆಯನ್ನೂ ಕಸಿದಿದೆ.ರಾತ್ರಿಯಾದಂತೆ ನಿದ್ರೆ ಬಾರದಂತಿರಲು ಪ್ರಯತ್ನ ಮಾಡುವಂತಾಗುತ್ತದೆ ಎಂದು ತಮ್ಮ ಕಷ್ಟವನ್ನು ತೋಡಿ ಕೊಂಡರು. ಮಿತ್ರರಿಗೂ ವಿಷಯ ಗಂಭೀರವೇ ಎನ್ನಿಸಿತು.  ಆದರೆ ಅದರ ಬಗ್ಗೆ  ಅಧಿಕಾರಯುತವಾಗಿ ಮಾತನಾಡಲು ಚೌಗಳೆ ಯವರೇ ಸರಿ ಎಂದು ಎಲ್ಲರೂ ಅವರ ಕಡೆಗೆ ನೋಡಿದರು. ಡಾಕ್ಟರ್ ಚೌಗಳೆಯವರು ಕೆಲವು ನಿಮಿಷಗಳ ಮೌನದ ನಂತರ ರಾಯರ ಕಡೆಗೆ ತಿರುಗಿ, ಯಾವತ್ತಿನಿಂದ ಈ ರೀತಿಯ ಕನಸುಗಳು ಬೀಳುತ್ತಿವೆ ಎಂದರು. ರಾಯರೀಗ ನಿಧಾನಕ್ಕೆ ತಮ್ಮ ನೆನಪನ್ನು ಹಿಂದಕ್ಕೊಯ್ದರು. ಆದರೂ ನಿಖರವಾಗಿ ಯಾವತ್ತಿನಿಂದ ಎಂದು ಹೇಳಲು ಸಾಧ್ಯವಾಗಲಿಲ್ಲ. ಆಗ ಚೌಗಳೆಯವರು , 'ಇರಲಿ  ಬಿಡು   ನೀನು    ಕನಸಲ್ಲಿ ಓಡಿಸುತ್ತೇನೆಂದು  ಹೇಳಿದೆಯಲ್ಲ ಆ ಕಾರಿನ ಬಣ್ಣ ನೆನಪಿದೆಯೇ' ಎಂದು ಕೇಳಿದರು. ರಾಯರಿಗೀಗ  ಅವರ ಎರಡೂ ಪ್ರಶ್ನೆಗೆ ಸಮರ್ಪಕ  ಉತ್ತರ ಹೊಳೆಯಿತು.' ಹಾಂ.. ಈಗ ನೆನಪಾಯಿತು ನೋಡು. ಇದೆಲ್ಲ ಪ್ರಾರಂಭವಾಗಿದ್ದು ಮಗ ಸುಮಂತ ಹೊಸ ಕಾರು ತಂದ ಮೇಲೆಯೆ. ಅದೇ ಕಾರನ್ನು ನಾನು ಕನಸಲ್ಲೂ ಬಿಡುತ್ತಿದ್ದುದು ಎಂದರು. ಸರಿ ಸರಿ.... ಮಗನೊಡನೆ ಎಲ್ಲಾದರೂ ದೂರ ಪ್ರಯಾಣ ಮಾಡಿದ್ದಿದೆಯೇ ಎಂದು ಡಾಕ್ಟರು ಕೇಳಿದಾಗ , ರಾಯರು ತಲೆ ಕೆರೆದು ಕೊಳ್ಳುತ್ತಾ.. ದೂರ ಅಂದ್ರೆ .. ಹುಂ .. ನನ್ನ ತಂಗಿ ಜಲಜನ ಮನೆಗೊಮ್ಮೆ ಹೋದದ್ದಿದೆ. ಅದು  ಹೆಚ್ಚು ಕಡಿಮೆ 500 ಕಿ ಮೀ ದೂರ ಎಂದರು. ಡಾಕ್ಟರು ತಮ್ಮ ಪ್ರಶ್ನಾವಳಿ ಮುಂದುವರಿಸಿ 'ಆಗ ನೀನು ಎಲ್ಲಿ ಕುಳಿತಿದ್ದೆ  ನೆನಪಿದೆಯೇ' ಎಂದರು. ಅದಕ್ಕೆ ರಾಯರು; 'ಖಂಡಿತ .. ಎದುರುಗಡೆ , ಮಗನ ಪಕ್ಕವೇ ಕುಳಿತಿದ್ದೆ . ನನ್ನ ಸೊಸೆ ಮತ್ತು ಮಡದಿ ಹಿಂದೆ ಕುಳಿತಿದ್ದರು ' ಎಂದರು ಓಹ್! ಓ ಕೆ ಹಾಗಿದ್ರೆ ನಿನ್ನ ಸಮಸ್ಯೆ ಸ್ವಲ್ಪ  ಅರ್ಥ  ಆದಂತೆ ಆಗಿದೆ. ಅದಕ್ಕೆ ಪರಿಹಾರ ನಿನ್ನ ಕೈಯಲ್ಲೇ ಇದೆ. ನೀನು ಮನಸ್ಸು ಮಾಡಬೇಕು ಅಷ್ಟೆ'  ಎಂದು ಡಾಕ್ಟರು ನುಡಿದರು.  'ಅಯ್ಯೋ .. ಈ ಕನಸಿನಿಂದ ತಪ್ಪಿಸಿ ಕೊಳ್ಳಲು ಏನು ಮಾಡಕ್ಕೂ ಸಿದ್ದ ಕಣಯ್ಯಾ ನಾನು' ಎಂದು ರಾಯರು ಅವಸರದಲ್ಲೇ ಉತ್ತರಿಸಿದರು. ಆಯ್ತು ಹಾಗಿದ್ರೆ ನಾಳೆ ಬೆಳಗ್ಗೆ  ಬೇಗ ನಮ್ಮ ಮನೆ ಕಡೆ ಬಾ,ಇವತ್ತು ಏನೂ ಆಗಲ್ಲ ನಿಶ್ಚಿಂತೆಯಿಂದ  ಮಲಗು, ನಾನಿದ್ದೀನಿ ಎಂದ ಸ್ನೇಹಿತನ ಭರವಸೆ ರಾಯರ ಮೊಗದಲ್ಲಿ ಕೊಂಚ ನಗು ಮೂಡಿಸಿತು. ಅವರ ಉಳಿದ ಸ್ನೇಹಿತರೂ ನಡುವೆ ಮಾತನಾಡದೆ ಕುತೂಹಲದಿಂದ ಮುಂದಾಗುವುದನ್ನು ಕಾದು ನೋಡೋಣ ಎಂಬಂತೆ ಕುಳಿತಿದ್ದರು.

ಇದಾಗಿ ಒಂದು ತಿಂಗಳಾದರೂ ರಾಯರು ಮತ್ತು ಡಾಕ್ಟರು ಇಬ್ಬರೂ ಪಾರ್ಕಿನಲ್ಲಿ ಕಾಣಿಸಲಿಲ್ಲ. ಕೆಲವು ದಿನ ಅವರ ಬಗ್ಗೆ ಮಾತನಾಡುತ್ತಾ ಅವರ ದಾರಿ ಕಾಯುತ್ತಿದ್ದ ಸ್ನೇಹಿತರು ಈಗೀಗ ಬೇರೇ ವಿಷಯದ ಕಡೆಗೆ ಗಮನ ಹರಿಸಿದ್ದರು. ಅವತ್ತೂ ಎಂದಿನಂತೆ ಗಾಳಿಸೇವನೆಗಾಗಿ ಬಂದವರು ಸುಮ್ಮನೆ ರಸ್ತೆ ಕಡೆಗೆ ನೋಡುತ್ತಿದ್ದಾಗ ಅಲ್ಲೇ ಒಂದು ಕಾರು ಬಂದು  ನಿಂತಿತು . ಅದರ ಒಳಗಿಂದ ರಾಯರು ಮತ್ತು ಡಾಕ್ಟರು ಇಬ್ಬರೂ ಗೆಲುವಿನ ಮೊಗ ಹೊತ್ತು ಇಳಿದದ್ದು ಕಾಣಿಸಿತು.ಸ್ನೇಹಿತರೆಲ್ಲ ಸಂತಸದಿಂದ  ಬರ ಮಾಡಿಕೊಂಡು ಡಾಕ್ಟರ ಕಡೆ ಕುತೂಹಲದ ನೋಟ ಬೀರಿದರು. ಡಾಕ್ಟರು  ರಾಯರ ಕಡೆಗೆ ನಗುತ್ತ ನೋಡಿ ' ಹೇಳ್ತೀಯೇನಪ್ಪ  ನಿನ್ನ ಕನಸಿನ ತೊಂದರೆಯ ಪರಿಹಾರವನ್ನು ' ಎಂದರು. ರಾಯರು ಸ್ನೇಹಿತನ ಹೆಗಲ ಮೇಲೆ ಕೈ ಹಾಕಿ ನೀನೇ ಹೇಳು. ನೀನೇ ವಿವರಿಸಿದರೆ ಚೆಂದ ಅದು ಎಂದರು. ಉಳಿದ ಸ್ನೇಹಿತರೂ ರಾಯರನ್ನೇ ಅನುಮೋದಿಸಿದರು. ಎಲ್ಲರ  ನೋಟ ತನ್ನ ಮೇಲೆ ಕೇಂದ್ರೀಕೃತವಾಗಿರುವುದನ್ನು  ದೃಢ ಪಡಿಸಿಕೊಂಡ ಡಾಕ್ಟರ್ ಚೌಗಳೆ ಒಮ್ಮೆ ಗಂಟಲು ಸರಿ ಪಡಿಸಿಕೊಂಡು ಶುರು ಮಾಡಿದರು. ನೋಡಿ.. ಇವನೇ ಒಪ್ಪಿ ಕೊಂಡಂತೆ ತೊಂದರೆ ಸುರುವಾದದ್ದೇ ಇವನ ಮಗ ಕಾರು ತಂದ ಮೇಲೆ ಎಂಬುದು ನಿಮಗೆ ನೆನಪಿದೆ ತಾನೆ.. ನನಗಾಗಲೇ  ಇವನ ಸಮಸ್ಯೆಯ ಮೂಲದ ಬಗ್ಗೆ ಸುಳಿವು ಸಿಕ್ಕಿತ್ತು . ನಿಮಗೆಲ್ಲ ತಿಳಿದಿರುವಂತೆ ಇವನಿಗೆ   ಡ್ರೈವಿಂಗ್ ಬರೋದಿಲ್ಲ. ಆದರೆ ಮಗ ಕಾರು ತಂದ ನಂತರ ಕಾರು ಕಲಿಯ ಬೇಕೆನ್ನುವ ಆಸೆ ಮೊಳೆಯತೊಡಗಿತು.  ಆದರೆ ಮನೆಯವರಲ್ಲಿ ಹೇಳಿದರೆ ಇಷ್ಟು ವಯಸ್ಸಾದ ಮೇಲೆ ಇದೆಂತಹಾ ಅಸೆಯೆಂದು ತಿರಸ್ಕರಿಸುತ್ತಾರೆಂಬ ಭಯ. ಜೊತೆಗೆ ಒಂದೆರಡು ಬಾರಿ ಇವನಿಗೆ   ಕಾರಿನ ಅಗತ್ಯವಿದ್ದಾಗ  ಮಗ ಜೊತೆಗೆ ಬಾರದಿದ್ದದ್ದು  ಇವನ   ಬಯಕೆ ಇನ್ನಷ್ಟು  ಚಿಗುರಲು ಕಾರಣವಾಯಿತು.  ಕಾರು ಚಲಾಯಿಸಬೇಕೆಂಬ ಹಂಬಲ ಸುಪ್ತ ಮನಸ್ಸಿನಲ್ಲಿ ಆಳವಾಗಿ ಬೇರೂರಿದ್ದರಿಂದ , ಇವನ   ಮನಸ್ಸು ಕನಸಿನಲ್ಲಿ  ಅದನ್ನು ನಿಜವಾಗಿಸಲು ತೊಡಗಿತು. ಪೂರ್ಣ ಡ್ರೈವಿಂಗ್ ಜ್ನ್ಯಾನ ಇಲ್ಲದ ಕಾರಣ ,ಇಂಜಿನ್ ಆನ್ ಮಾಡಿ ಏನನ್ನೋ ತುಳಿದರೆ ಕಾರ್ ಚಲಿಸುವುದೆಂದು ಮಾತ್ರ ತಿಳಿದುಕೊಂಡಿದ್ದನು . ಏರು ಹಾದಿ ಬಂದಾಗ ಕುಗ್ಗುವ ವೇಗಕ್ಕೆ ಸರಿಯಾಗಿ ಗೇರ್ ಬದಲಾಯಿಸುವುದು  ಇವನಿಗೆ   ತಿಳಿದಿರಲಿಲ್ಲ.  ತನಗೆ  ಡ್ರೈವಿಂಗ್ ಬರುವುದಿಲ್ಲ ಎಂಬ ಸತ್ಯ ತಿಳಿದಿದ್ದ  ಮನಸ್ಸು  ಅಲ್ಲಿ ಭಯದಿಂದ ಮುಂದೆ ಹೋಗದೆ ನಿಲ್ಲುತ್ತಿತ್ತು. ಜೊತೆಗೆ ಆ ಭಯವೇ ಚಿರತೆಯ ರೂಪ ತಾಳಿ  ಕಣ್ಣೆದುರು ಮೃತ್ಯುವಾಗಿ ಕಾಣಿಸಿ ಕೊಳ್ಳುತಿತ್ತು.. ' ಎಂದು ಒಮ್ಮೆ ಮಾತು ನಿಲ್ಲಿಸಿ, ತದೇಕ ಚಿತ್ತ ದೊಂದಿಗೆ ಕೇಳುತ್ತಿದ್ದ ಸ್ನೇಹಿತರನ್ನು ನೋಡಿದರು .ಆಗ ಸ್ನೇಹಿತರಲ್ಲೊಬ್ಬರು, ಅದು ಸರಿ ಇವರ ಸಮಸ್ಯೆ  ತುಂಬಾ ಕುತೂಹಲಕಾರಿಯಾಗಿದೆ ! ಇದನ್ನು ಹೇಗೆ ಬಗೆಹರಿಸಿದಿರಿ ಡಾಕ್ಟರ್ ? ಎಂದು ಕೌತುಕದಿಂದ ಪ್ರಶ್ನಿಸಿದರು. ಆಗ  ಡಾಕ್ಟರ್  ಮತ್ತೆ ಪ್ರಾರಂಭಿಸಿ, ' ಇವನ ಭಯಕ್ಕೆ ಇದ್ದುದು ಒಂದೇ ಮದ್ದು'.. ಅದೆಂದರೆ ಡ್ರೈವಿಂಗ್ ಕಲಿಯುವುದು !.. ನಿಮ್ಮಿಂದ ಮರೆಯಾಗಿದ್ದ ಈ ಒಂದು ತಿಂಗಳುಗಳ ಕಾಲವನ್ನು   ಡ್ರೈವಿಂಗ್ ಕಲಿಯಲು ವಿನಿಯೋಗಿಸಿದ್ದೆವು ! ಈಗ ನೋಡಿ   ಮಗನ ಕಾರನ್ನು   ಡ್ರೈವ್ ಮಾಡಿಕೊಂಡು ಬಂದಿದ್ದು  ಇವನೇ .... ಎಂದರು.ಈ ವೃತ್ತಾಂತವನ್ನು  ಕೇಳಿ ಸ್ನೇಹಿತರೆಲ್ಲರೂ  ವಿಸ್ಮಿತರಾದರು . ರಾಯರು ಸ್ನೇಹಿತರ  ಕಡೆಗೆ ಹೆಮ್ಮೆಯಿಂದ ನೋಡಿ ' ಈ  ಖುಶಿಗೆ ನನ್ ಕಡೆಯಿಂದ ನೀವು ಹೇಳಿದ ಹೋಟೆಲ್ನಲ್ಲಿ  ಟ್ರೀಟ್ ಎಂದರು. ಆದರೂ ಕುತೂಹಲ ತಣಿಯದ ಒಬ್ಬ ಮಿತ್ರ ಕೇಳಿದ. "ಅದೆಲ್ಲ ಸರಿ ಕಣೋ  .. ಈಗ್ಲೂ ಇನ್ನೊಮ್ಮೆ ಅದೇ ಕನಸು ಬಿತ್ತು ಅಂತಿಟ್ಕೋ , ಆವಾಗೇನು  ಮಾಡ್ತೀಯೋ" ಎಂದರು. ರಾಯರು ಗರ್ವದಿಂದಲೇ .. "ಮಾಡೋದೇನು.?!. ಚಿರತೆ  ನನ್ನ ಕಾರ್ ಹತ್ತಿರ ಬರೋ  ಮುಂಚೆ ನಾನು ಸ್ಪೀಡಾಗಿ ಕಾರು ಮುಂದಕ್ಕೊಡಿಸ್ತೀನಿ " ಎಂದರು . ರಾಯರ ಆತ್ಮ ವಿಶ್ವಾಸಭರಿತ ಮಾತುಗಳನ್ನು  ಕೇಳಿ ಸ್ನೇಹಿತರೆಲ್ಲರೂ ಕುಶಿಯಿಂದ ನಕ್ಕರು. ರಾಯರೂ ಸಹ ಸ್ಮಿತ ವದನರಾಗಿ ,  "ಈಗೇನು ನಗುತ್ತಾ  ಇಲ್ಲೆ ಕೂತಿರ್ತಿರೋ.. ಅಲ್ಲ ಹೋಟೆಲಿಗೆ ನನ್ನ ಜೊತೆ ಕಾರಲ್ಲಿ ಬರ್ತೀರೋ.."  ಎಂದರು. "ಸರಿ ನಡಿಯಪ್ಪಾ ಬೇಗ"  ಎಂದು ಮುಂದಕ್ಕೆ ಸಾಗುತ್ತಿದ್ದ ರಾಯರ ಹಿಂದೆ ಲಘುಬಗೆಯಿಂದ ಹೊರಟ ಮಿತ್ರರು, ಈ ಮನದ ಮಾತೆ ವಿಚಿತ್ರ ಎಂದುಕೊಂಡು ಅವರೊಡನೆ ಹೆಜ್ಜೆ ಜೋಡಿಸಿದರು.  
-- 

Saturday, January 29, 2011

* * ಮುಗಿಯದ ಪಯಣ




 ನೆಟ್ಟ ನೋಟದಿ ಚಲಿಸುತ್ತಿತ್ತು, ತನ್ನ ಗುರಿಯೆಡೆಗೆ 
ನಡು ನಡುವೆ ನಿಂತು ಸಾಗಿಸುತ್ತಿತ್ತು, ಎಲ್ಲರ ಅವರವರ ಗುಡಿಯೆಡೆಗೆ 
ಏರು ತಗ್ಗುಗಳ ದಾಟಿ ಮುಂದೆ  ಮುಂದೆ 
ಮರೆಯಾಯಿತೆ ಬಂದ ದಾರಿ ಹಿಂದೆ 
ಕಾಲ ಯಾವುದೇ ಇರಲಿ,ಮಿತಿಯಿಲ್ಲದ ಹೊತ್ತು 
ಜನರ ಸಂಕಟವು ಅದಕೆ ಗೊತ್ತು 
ಯಂತ್ರವಾದರು ಇದೆಯೆ ಹೃದಯವಿದಕೆ 
ಈಡೇರಿಸುವುದು ಪ್ರತಿ ಮನದ ಬಯಕೆ 
ಜನರಿಗೆನೋ ತಮ್ಮದೇ ಊರು,ನಿಲ್ದಾಣ 
ಇದಕಾದರೂ ಒಮ್ಮೆ ನಿಂತರೂ, ಮುಂದುವರಿಯಬೇಕಿದೆ ಯಾನ 
ಬೇರಾಗಿಸುವುದೂ, ಒಂದುಗೂಡಿಸುವುದು ತನಗರಿಯದೆ 
ಮತ್ತೆ ಸಾಗಿತದು .. ಎಲ್ಲಿಗೀ ಪಯಣ ಬಗೆ ಹರಿವುದೇ   

Wednesday, January 26, 2011

* ಸೇರುವ ತವಕ ...... 

ಸುತ್ತ ಹಸಿರ ಸಿರಿ ಹೊತ್ತು
ಬಳುಕು ನಡೆಯಲಿ 
ಕುಲುಕಿ ಸಾಗುವ  ಪರಿ ಇದೇನು ..

ಮೈಯೊಳಗೆಲ್ಲಾ  ಚಿತ್ತ ಚಿತ್ತಾರದಿ 
ಬೆಳಕಿನ ಮಲ್ಲಿಗೆಯ 
ಮಾಲೆ ನೇಯ್ದಿರುವರೇನು...

 ನೀನೇ ಬರ  ನೀಗುವ ಗಂಗೆಯಾದರೂ 
ತೀರದ ದಾಹ ಹೊತ್ತಂತೆ ಚಲಿಸುವೆಯೇಕೆ 
ಕಂಪಿಸುತಿದೆ ನಿನ್ನ ತನು 

ಒಂದೊಂದು  ಹನಿ ಯನ್ನೂ ಸಾಗರದೊಳು 
ಸಮಾಗಮಿಸುವ ಆಸೆಯಲಿ 
 ಕುಲುಕುತ್ತಾ ಸಾಗುತಿಹೆಯೇನು .. 

 ಎಲ್ಲಿಂದ ಬಂತು ಈ ನಾಚಿಕೆ, ವೈಯ್ಯಾರ 
 ಹರಿವಾಗ ಕೇಳುವ, ಕಾಲ್ಗೆಜ್ಜೆಯ ಮಧುರ ಸ್ವರ 
ಹೇಳಿಬಿಡು ನನಗೆ,  ಹೆಣ್ಣೇ ನೀನು ....

ಯಾವ ಸ್ಪರ್ಶಕೆ ರೋಮಾಂಚನಗೊಂಡೆ ಹೇಳು 
ಒಂದೊಂದು ಕಂಪನಕೂ 
ನೂರಾರು ಅರ್ಥವಿಹುದೇನು 

ಬಯಲಾದಂತೆ ಕಂಡರೂ 
ಹೊತ್ತಿರುವೆ ನೂರಾರು  ರಹಸ್ಯಗಳ 
ಹುಲು ಮನುಜರು ನಾವು ಬಿಡಿಸಲಾರೆವದನು ..


Friday, January 7, 2011

ಇಡೀ ಲೋಕ ಕತ್ತಲ ಮೌನದಲ್ಲಿ ನಿದ್ರಿಸುತ್ತಿರುವಾಗ, ಈ   ಗಂಧರ್ವರು ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಭೂಮಿಗಿಳಿಯುತ್ತಾರೆ.ಅಂಧಕಾರದಲ್ಲೇ ತಮ್ಮ ಗಮ್ಯವನ್ನು ಗುರುತಿಸುವ ಇವರು ಮೆತ್ತಗೆ ಹೂಗಳ   ಮನೆಯ ಬಾಗಿಲು ಬಡಿಯುತ್ತಾರೆ. ತಮ್ಮ ತಂಪಿನಿಂದಲೇ ಆತ್ಮೀಯತೆಯನ್ನು ಸೂಸಿ ಅವುಗಳ  ಒಡನಾಟ ಗಳಿಸುತ್ತವೆ. ಕನಸ ಲೋಕದಲ್ಲಿ ಕಳೆದು ಹೋಗಿರುವ ಹೂಗಳು ಇವರ  ಮಧುರ ಸ್ಪರ್ಶಕ್ಕೆ ಮನಸೋತು, ಕಣ್ತೆರೆದು ಸ್ವಾಗತಿಸಿ,ತಮ್ಮ ಮೃದು ದಳಗಳನ್ನೇ ಹಾಸಿಗೆಯಂತೆ ಹಾಸಿ ಕುಳ್ಳಿರಿಸುತ್ತವೆ.ಜನ್ಮ ಜನ್ಮಗಳಿಂದ ಹೇಳದೆ  ಉಳಿದು ಹೋದ ಮಾತುಗಳನ್ನು ಮೌನವಾಗಿಯೇ ಕತೆಯಾಗಿಸುತ್ತಾರೆ. .   
  ಒಂದೊಂದೇ ಹನಿ ಹೂವಿನ   ಮೇಲೆ ಬಿದ್ದಾಗಲು ರೋಮಾಂಚನ ... ನವ ಕಂಪನ .. ಹೊಸ ಹುಟ್ಟಿಗೆ, ಹೊಸ ಚಿಗುರಿಗೆ ಮುತ್ತಿನಾಲಿಂಗನ...ಪ್ರಕೃತಿಯ ಅದ್ಭುತ ಚಿತ್ರಕಾವ್ಯ... ಬಣ್ಣ ಬಣ್ಣದ ಹೂಗಳ ಮೇಲೆ ಪವಡಿಸಿದ ನೀರಹನಿ, ತಂಟೆಕೋರ ಪುಟ್ಟ ಮಗು ಈಗಲೋ ಆಗಲೋ ತಾಯ ಸೊಂಟದಿಂದ ಜಾರುವಂತೆ .....ಮತ್ತೊಂದು ಹನಿಯು ಸಂಗಾತಿಯಾದರೆ  ಹೂವಿನ  ಚಿಂತೆ ಮರೆತು ಮೆಲ್ಲನಿಳಿದು ಭೂಮಿ ತಾಯೊಡಲ  ಸೇರುವ ಪರಿ...   ಹೂಗಳ ಎದೆ ಭಾರವಾಗಿಸುತ್ತವೆ
'
ಬೆಳಗು' ಎಲ್ಲರನ್ನು ,ಎಲ್ಲವನ್ನು ಎಚ್ಚರಿಸಿ ಹೊಸದಿನಕ್ಕೆ ನೂಕುವ ಪ್ರತಿನಿತ್ಯದ ಬೆರಗು. ಈಗ ಹೂಗಳಿಗೂ ಇಬ್ಬಂದಿತನ. ಹಾಗೆಂದು ಕರ್ತವ್ಯದ ಕೂಗಿಗೆ ವಿಮುಖವಾಗುದು ಸಾಧ್ಯವೇ..?ಮೆಲ್ಲನೆ ಮೈ ಮುರಿದು ಏಳುವ ತವಕ. ಹಾಗೆಂದು ಅಷ್ಟು ಬೇಗನೆ ಏಳಲು ಬಿಟ್ಟಾವೆಯೇ, ಅಪ್ಪಿ ಹಿಡಿದ ನೀರ ಹನಿಗಳು. ಒಂದೊಂದು ಹನಿಯೂ ಇನ್ನೂ ಕೊಂಚ ಹೊತ್ತು ನನ್ನ ಆಲಿಂಗನದಲ್ಲೇ ಇರು ಎಂದು ಪ್ರೇಯಸಿಯನ್ನು  ಪೀಡಿಸುವ  ಪ್ರಿಯಕರನಂತೆ  ಕಾಡುತ್ತವೆ.  ತಲೆ ಎತ್ತಿ ನೋಡಲೂ ನಾಚಿಕೊಳ್ಳುವ ಹೂಗಳ ಮೊಗದಲ್ಲಿ ಸಾರ್ಥಕ ಭಾವ. ತನ್ನೊಳಗೆ ತುಂಬಿಕೊಂಡ ಪ್ರತಿ ಹನಿಯ ಪ್ರೀತಿಯನ್ನು ಇನ್ನಷ್ಟು ಆಸ್ವಾದಿಸುವ ಆತುರ. ಸ್ವಲ್ಪ ಹೊತ್ತಲ್ಲೇ ಬರುವ ಸೂರ್ಯನ ಆಗಮನಕ್ಕೆ ಮೊದಲೇ ಇನ್ನೊಂದಿಷ್ಟು ಅಕ್ಕರೆಯನ್ನು ಸೂರೆಗೈಯುವ ತವಕ... ಹರಿಯುವ ತನ್ನ ಮೂಲಗುಣವನ್ನೇ ಮರೆತು ಬಿರಿದ ಹೂಗಳ ನಡುವೆ ಸಿಂಗರಿಸಿಕೊಂಡು ನಿಲ್ಲುವುದು ಹನಿ ನೀರಿಗೂ ಪ್ರಿಯವೆಂದೇ ತೋರುತ್ತದೆ.ತನ್ನ ಒಂದೊಂದೇ ಹನಿಯನ್ನು ಜತನದಿಂದ ಹೂವ ಮೇಲೆ ಹಾರವಾಗಿ ಜೋಡಿಸುವ ಇವರ ಕಲೆ ಅತಿ ಸುಂದರ. ಕೆಲವೊಮ್ಮೆ ರಂಗೋಲಿಯ ಚುಕ್ಕಿಗಳಂತೆ ಸಮಾನಾಂತರದಲ್ಲಿ ನಿಂತರೆ , ಮತ್ತೊಮ್ಮೆ ಗುರುಗಳ ಬೆತ್ತಕ್ಕೆ ಹೆದರಿದ ಪುಟ್ಟ ಮಕ್ಕಳಂತೆ ಸಾಲಿನಲ್ಲಿ ನಿಂತು ಬೆಳಕು ತಾಕಿದಾಗ ಎಳೆ ಬಿಸಿಲಿನ ನೋಟಕ್ಕೆ ತಾನು ಕಣ್ಣು ಕೊಟ್ಟು ಪಳಕ್ ಎಂದು ಸಂಭ್ರಮಿಸುವುದು , ಹೊಳೆವ ವಜ್ರವ ಯಾರೋ ಅನಾಮತ್ತಾಗಿ ಇಲ್ಲೆಲ್ಲಾ ಚೆಲ್ಲಿ ಹೋದಂತೆನಿಸದಿರದು.ಬೇರಿನಾಳಕ್ಕಿಳಿದು ಚಿಗುರ ಹೊರ ತರಿಸುವ ನೀರು ಹಸಿರೆಲೆ, ಹೂಗಳ ಮೇಲೆ ಮೂಡಿಸುವ ಚಿತ್ತಾರ.... ಹೋಲಿಕೆಗೆ ನಿಲುಕದ ಸೌಂಧರ್ಯ ....ಯಾರೂ ಕುಂಚ ಹಿಡಿದು ಬಣ್ಣ ತೀಡದಿದ್ದರೂ,ಇವು ಮೆರೆಸುವ ರಂಗಿನ ಸಡಗರ  ....


ಸಹಜವಾಗಿಯೇ ಸುಂದರವಾಗಿರುವ ಹೂವನ್ನು ಅಲಂಕರಿಸಿ ಪ್ರತಿ ನಿತ್ಯ ನವ ವಧುವನ್ನಾಗಿಸುವುದು ಇವರ ಹವ್ಯಾಸ. ಯಾವ ಅರಸಿಕನೂ ಇವರ ಮಾಯೆಯ ಬಲೆಗೆ ಸಿಲುಕದಿರಲಾರ.ಹೂಗಳು ನಿಧಾನಕ್ಕೆ ಸೂರ್ಯಮುಖಿಗಳಾದಂತೆ ಇವು ಮೆಲ್ಲನೆ ತಮ್ಮ ಆಕಾರವನ್ನು ಕಳೆದು ಕೊಳ್ಳುತ್ತವೆ. ಬಿರು ಬಿಸಿಲಿನ ದಾಳಿಗೆ ಆರಿ ಹೋಗುವ ಅರಿವಿದ್ದರೂ ಸ್ವಲ್ಪವೂ ಖೇದ ಪಡದೆ ಇರುವ ಬದುಕನ್ನು ತುಂಬು ಹೃದಯದಿಂದ ಪ್ರೀತಿಸುವ ಇವರ ಜೀವನ ಪ್ರೀತಿ ಅದ್ಭುತ. ಇರುವ ಕ್ಷಣ ಹೊತ್ತಲ್ಲೂ ಸೌಂಧರ್ಯದ ಎಲ್ಲಾ ಮಜಲುಗಳನ್ನು ಕ್ರಮಿಸುತ್ತವೆ.  

 ಅರಳಿ ನಗುವ ಹೂಗಳ ಮೇಲೆ ನೀರ ಚಿನ್ನಾಟ ಪದಗಳ ಬಂಧನದಲ್ಲಿ ಉಳಿಯದು..ನೋಡಿಯೇ ಅನುಭವಿಸಬೇಕಿದರ  ಸವಿ.. ಬಿಂಕ ಬಿನ್ನಾಣ .. 



Tuesday, December 28, 2010

ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ವಿಟ್ಲ, ಬಂಟ್ವಾಳ ತಾಲೂಕು,ದ.ಕ



ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ವಿಟ್ಲ, ಬಂಟ್ವಾಳ ತಾಲೂಕು,ದ.ಕ.

ವಿಟ್ಲ ಅರಸರ ಕುಲದೇವರಾಗಿ,ಅರಮನೆಯ ನೇರ ಆಡಳಿತಕ್ಕೆ ಒಳಪಟ್ಟ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವು, ಸೀಮೆ ದೇವಸ್ಥಾನ ಎಂದೇ ಪ್ರಸಿದ್ದಿ. ಹತ್ತೊಂಬತ್ತು ಗ್ರಾಮಗಳನ್ನು ಒಳಗೊಂಡ ವಿಟ್ಲ ಸೀಮೆಯ ಮುಖ್ಯ ದೇವಸ್ಥಾನ. ಅತಿ ಅಪೂರ್ವವಾದ ಗಜಪೃಷ್ಠ ಆಕಾರದ ಶೈಲಿ ಮತ್ತು ದ.ಕ. ಜಿಲ್ಲೆಯಲ್ಲಿಯೇ ಅತ್ಯಂತ ದೊಡ್ಡದಾದ ಪಶ್ಚಿಮಾಭಿಮುಖವಾದ ಗರ್ಭಗುಡಿ ಕಾಣಸಿಗುವುದು ಈ ದೇವಾಲಯದ ವೈಶಿಷ್ಟ್ಯ. ಇನ್ನೊಂದು ಅಚ್ಚರಿ ಎಂದರೆ ನಾಲ್ಕು ಸಾವಿರದ ಏಳು ನೂರ ಐವತ್ತು ಚದರ ಅಡಿ ವಿಸ್ತೀರ್ಣ ಹೊಂದಿದ ಈ ದೇವಾಲಯ, ಪಂಚಾಂಗವಿಲ್ಲದೆಯೇ ಗದ್ದೆಯೊಂದರಲ್ಲಿ ನಿರ್ಮಿಸಲ್ಪಟ್ಟಿರುವುದು.
ಪ್ರಧಾನ ಗರ್ಭಗುಡಿಯಲ್ಲಿ ಶಿವನ ಪಂಚರೂಪಗಳಾದ ಸದ್ಯೋಜಾತ , ವಾಮದೇವ, ಅಘೋರ, ತತ್ಪುರುಷ ಮತ್ತು ಈಶಾನ ಎಂಬ ಹೆಸರುಗಳಿಂದ ಪೂಜಿಸಲ್ಪಡುವ ಐದು ಲಿಂಗಗಳು ಒಂದೇ ಪೀಠದಲ್ಲಿ ರಾರಾಜಿಸುತ್ತಿವೆ. ಇವು ಪ್ರಾಕೃತಿಕ ಶಿಲಾ ಖಂಡಗಳು. ಗಾತ್ರದಲ್ಲಿ ಒಂದಕ್ಕಿಂತ ಒಂದು ಹಿರಿದಾಗಿದೆ.
ಪಾಂಡವರಿಂದ ನಿರ್ಮಿತವಾದ ದೇವಾಲಯವೆಂಬ ಐತಿಹ್ಯವು ಇಲ್ಲಿಗಿದೆ. ಪಾಂಡವರು, ತಮ್ಮ ವನವಾಸ ಕಾಲದಲ್ಲಿ ಇಲ್ಲಿ ವಾಸ ಮಾಡಿದ್ದರು. ಅವರಿಗೆ ಇಲ್ಲೊಂದು ಶಿವ ದೇವಾಲಯವಿರಬೇಕೆಂಬ ಬಯಕೆಯಾಗಿ, ಕಾಶಿಯಿಂದ ಲಿಂಗಗಳನ್ನು ತರಲು ಭೀಮನನ್ನು ಕಳುಹಿಸಿದರು. ಅತ್ಯಂತ ವೇಗವಾಗಿಯೇ ಭೀಮ ಹೋದರೂ, ಪ್ರತಿಷ್ಠ ಸಮಯಕ್ಕೆ ಸರಿಯಾಗಿ ಲಿಂಗಗಳನ್ನು ತರಲು ವಿಫಲನಾದನು. ಆದರೆ ಆ ನಿರ್ದಿಷ್ಟ ಮುಹೂರ್ತದಲ್ಲೇ ಪ್ರತಿಷ್ಠೆ ಆಗಬೇಕಾದುದರಿಂದ ಬೇರೊಂದು ಶಿಲೆಯನ್ನು ಸ್ಥಾಪಿಸಿ ಪೂಜಿಸಿದರು. ಅಷ್ಟರಲ್ಲಿಯೇ ಅಲ್ಲಿಗೆ ಬಂದ ಭೀಮನು, ತಾನು ತಂದ ಲಿಂಗಗಳು ವ್ಯರ್ಥವಾಗುವುದೆಂದು, ಮೊದಲು ಪೂಜಿಸಿದ್ದ ಲಿಂಗವನ್ನು ಕಿತ್ತೆಸೆದು, ಕಾಶಿಯಿಂದ ತಾನು ತಂದ ಲಿಂಗಗಳನ್ನು ಆ ಸ್ಥಾನದಲ್ಲಿಟ್ಟನು. ನೈವೇದ್ಯಕ್ಕೆ ಬೇರೇನೂ ಇಲ್ಲದಿದುದರಿಂದ, ಮೊದಲೇ ನೈವೇದ್ಯ ಮಾಡಲಾದ ಅನ್ನಕ್ಕೆ ನೀರು ಚಿಮುಕಿಸಿ, ಅದನ್ನು ಪುನಃ ಬೆಂಕಿಯ ಮೇಲಿರಿಸಿ ಅರ್ಪಿಸಿದನು. ಆದ್ದರಿಂದ ' ವಿಟ್ಲದ ದೇವರಿಗೆ ತಂಗಳು ನೈವೇದ್ಯ' ಎಂಬ ರೂಢಿ ಮಾತು ಇಂದಿಗೂ ಇದೆ.
ಆಕಾರ ಮತ್ತು ಶೈಲಿಯ ಬದಲಾವಣೆಯಿಲ್ಲದೆ, ಈ ದೇವಾಲಯವು ಸುಂದರವಾಗಿ ನವೀಕರಣ ಗೊಳ್ಳುತ್ತಿದೆ. ಇದರ ಕೆಲಸ ಕಾರ್ಯಗಳು ಭವಿಷ್ಯದಲ್ಲಿ ಅದ್ಭುತ ನಿರ್ಮಾಣ, ಮತ್ತು ಗತವೈಭಾವಕ್ಕೆ ಕಿಂಚಿತ್ತೂ ದಕ್ಕೆ ತರದ ನಿಟ್ಟಿನಲ್ಲಿ ಮುಂದುವರಿಯುತ್ತಿದೆ.



Monday, December 27, 2010

ಜಗವೆಲ್ಲ ಮಲಗಿರಲು ನಾನೊಬ್ಬಳೆದ್ದಿದ್ದೆ..

ಜಗವೆಲ್ಲ ಮಲಗಿರಲು ನಾನೊಬ್ಬಳೆದ್ದಿದ್ದೆ.. 

. ಈಗೆಲ್ಲ ಮಕ್ಕಳಿಗೆ ರಜಾ ಕಾಲ ಎಂದೇ ಇಲ್ಲ. ಯಾವಾಗ ನೋಡಲಿ ಆ ಕ್ಲಾಸು, ಈ ಕ್ಲಾಸು ,ಎಂದೂ ಸದಾ ಬೆನ್ನಿನ ಮೇಲೆ ಚೀಲವನ್ನು ಹೊಲಿದೆ ಇಟ್ಟು ಕೊಂಡಿರುತ್ತಾರೆ. ನಾನು ಹೇಳುತ್ತಿರುವುದು ಕೆಲವು ವರ್ಷಗಳ ಹಿಂದಿನ ಮಾತು
ಎಪ್ರಿಲ್ ರಜಾ ಎಂದರೆ ನಮ್ಮ ಸ್ವಾತಂತ್ರ್ಯದ ಪರ್ವ ಕಾಲ. ರಜೆ ಬಂದ ಕೂಡಲೇ ಅಜ್ಜನ ಮನೆಗೆ ಹೋಗುವುದು ನಮ್ಮ ಪ್ರಮುಖ ಕಾರ್ಯಕ್ರಮ. ಈ ಸಲ ದೊಡ್ಡಮ್ಮನ ಒತ್ತಾಯದ ಮೇರೆಗೆ ಅಲ್ಲಿಗೆ ಹೋಗಿತ್ತು ನನ್ನ ಸವಾರಿ.ಅಲ್ಲಿಗೆ ಹೋದ ಒಂದೆರಡು ದಿನಗಳಲ್ಲಿ ಮನೆಯಿಂದ ಎರಡು ಕಿ ಮೀ ದೂರದಲ್ಲಿರುವ ಯುವಕ ಯುವತಿಯರ ಸಂಘದ ವಾರ್ಷಿಕೋತ್ಸವದ ಸಡಗರ. ಅಜ್ಜನ ಮನೆಯ ಸಕಲ ಸರ್ವಾಧಿಕಾರವನ್ನೂ ಬಿಟ್ಟು ದೊಡ್ಡಮ್ಮನ ಮನೆ ಸೇರಲು ಇದುವೇ ಮೂಲ ಕಾರಣ. ಅಂತಹ ಕಾರ್ಯಕ್ರಮಗಳನ್ನು ನೋಡುವುದೆಂದರೆ ನನಗೆ ಅತಿ ಉತ್ಸಾಹ. ಅದನ್ನೇ ಅಸ್ತ್ರವಾಗಿ ಬಳಸಿ ದೊಡ್ಡಮ್ಮ ನನ್ನನ್ನು ಕರೆದು ಕೊಂಡು ಬಂದಿದ್ದರೂ, ಆ ದಿನ , ನಿದ್ರೆಯ ವಿಷಯದಲ್ಲಿ ಕುಂಭಕರ್ಣನಿಗಿಂತಲೂ ಒಂದು ಕೈ ಮಿಗಿಲಾದ ದೊಡ್ಡಮ್ಮನ ಮಗ ಅಂದರೆ  ನನ್ನ ಅಣ್ಣ ಮತ್ತು ಕಾಲುನೋವಿನಿಂದ ಹೆಚ್ಚು ಹೊತ್ತು ಕುಳಿತು ಕೊಳ್ಳಲಾಗದ ನನ್ನ ದೊಡ್ಡಮ್ಮ ಇವರಿಬ್ಬರನ್ನು ಹೊರಡಿಸುವಲ್ಲಿ ನನ್ನ ಕಲಿತ ಬುದ್ಧಿಯೆಲ್ಲವೂ ಖರ್ಚಾಯಿತು. ಜೊತೆಗೆ ಅಣ್ಣನಿಗೆ ನಿದ್ದೆ ಬಂದರೆ ಅಥವಾ ದೊಡ್ಡಮ್ಮನಿಗೆ ಕಾಲು ನೋವು ಜೋರಾದರೆ ಹಿಂದಿರುಗಿ ಬರಬೇಕೆನ್ನುವ ಷರತ್ತು. ಒಮ್ಮೆ ಮನೆಯಿಂದ ಹೊರಟರೆ ಸಾಕು ಎಂದು ಎಲ್ಲದಕ್ಕೂ ತಲೆ ಆಡಿಸಿದೆ. ರಾತ್ರಿಯ ಊಟವನ್ನು ಬೇಗ ಮಾಡಿ ಹೊರಟೆವು. 

ಈಗ ಒಂದು ಹೊಸ ಸಮಸ್ಯೆ ಎದುರಾಯಿತು. ಇರುವ ಒಂದೇ ಟಾರ್ಚನ್ನು ಯಾರು ಹಿಡಿದುಕೊಳ್ಳುವುದು ಎಂದು. ಕತ್ತಲೆಯೆಂದರೆ ಅತೀವ ಭಯ ನನಗೆ. ಎಷ್ಟು ಭಯ ಎಂದರೆ ಪಕ್ಕದ ಕೋಣೆಯಲ್ಲಿ ಬೆಳಕಿಲ್ಲದಿದ್ದರೆ ಯಾರಾದರೊಬ್ಬರು ಜೊತೆಗೆ ಬರಬೇಕಿತ್ತು. ಈಗ ಅಣ್ಣ ಟಾರ್ಚ್ ಹಿಡಿದುಕೊಂಡರೆ ನನಗೆ  ನಡೆಯಲು ಬೆಳಕು ಸಾಕಾಗುವುದಿಲ್ಲ ಎಂದು ಹಠ ಮಾಡಿ ನಾನೇ ಅದನ್ನು ಹಿಡಿದುಕೊಂಡೆ. ಜೊತೆಗೆ ಅದೊಂದು ಹೆಮ್ಮೆಯ ವಿಷಯ ಎನ್ನುವುದು ನನ್ನ ನಂಬಿಕೆಯಾಗಿತ್ತು. ಕೈಯಲ್ಲಿ ಟಾರ್ಚ್ ಹಿಡಿದು ಬೆಳಕನ್ನು ಎಲ್ಲಾ ಕಡೆಗೆ ಹಾಯಿಸುತ್ತಾ ಹೋಗುವ ಅವಕಾಶ ಸಿಗಲು ಇನ್ನೆಷ್ಟು ಕಾಲ ಬೇಕೇನೋ..? ಚಿಕ್ಕ ಮಕ್ಕಳು ಹಾಳು ಮಾಡುತ್ತಾರೆಂದು ಟಾರ್ಚು ಎಂಬ  ಮಾಯಾದೀವಿಗೆಯನ್ನು ಯಾರಿಗೂ ಸಿಗದಂತೆ ಅತಿ ಜಾಗರೂಕತೆಯಿಂದ  ಪ್ರತಿಸಲವೂ ಬೇರೆ ಬೇರೆ ಕಡೆ ಅಡಗಿಸಿಡುತ್ತಿದ್ದರು. ಕೆಲವೊಮ್ಮೆ ಅವರಿಗೆ ಇಟ್ಟಿದ್ದೆಲ್ಲಿ ಎಂದು ಮರೆತು ನಮ್ಮನ್ನೇ ನೀವೇ ಎಲ್ಲೋ ಹಾಕಿದ್ದೀರೆಂದು ಬಯ್ಯುವುದು ಇತ್ತು.ಅವರಿಂದ ಮೊದಲೇ ಅವರ ಎಲ್ಲಾ ತಾಣಗಳ ಪರಿಚಯವಿದ್ದ ನಾವುಗಳೇ ಅವರು ಅಡಗಿಸಿ ಇಟ್ಟ ಜಾಗವನ್ನು ಹೇಳಿ ಕೃತಾರ್ಥ ರಾಗುತ್ತಿದ್ದೆವು.  ಅಂತೂ ಇಂತೂ ನನ್ನ ಕೈಗೆ ಬಂದಿದ್ದ ಟಾರ್ಚು ಎಂಬ ಅಮೂಲ್ಯ ವಸ್ತುವನ್ನು ಜಾಗ್ರತೆಯಾಗಿ ಹಿಡಿದಿದ್ದೆ.ಅದರ ಬೆಳಕು ಪಕ್ಕದಲ್ಲಿದ್ದ ಮರದ ಕಾಂಡಗಳ ಮೇಲೆ ಹಾದು ಹೋದಾಗ ಹೆದರಿಯಾಗುತಿತ್ತು. ಕತೆಗಳಲ್ಲಿನ ಭೂತ ಪ್ರೇತಗಳೆಲ್ಲ ಅಲ್ಲೇ ಅಡಗಿರುವಂತೆ ಕಾಣಿಸುತ್ತಿತ್ತು. ಕತೆಗಳು ಎಂದರೆ ಸಾಧಾರಣವಲ್ಲ. ಎಲ್ಲಾ ಕತೆಗಳಲ್ಲೂ ರಾಜಕುಮಾರರಿದ್ದಂತೆ ಒಂದು ಭೂತವೋ, ರಾಕ್ಷಸನೋ ಇರಲೇಬೇಕಿತ್ತು. ಅದಿಲ್ಲದ ಕತೆಗಳು  ರುಚಿಸುತ್ತಲೇ ಇರಲಿಲ್ಲ. ಆದರೆ ರಾತ್ರಿಯಾದಂತೆ ಅದರ ರಾಜಕುಮಾರರೆಲ್ಲ ಮಾಯವಾಗಿ ಕೇವಲ ಭೂತ ಪ್ರೇತಗಳೇ ಉಳಿದು ಘೋರ ರೂಪಿಗಳಾಗಿ ನನ್ನನ್ನು ಹೆದರಿಸುತ್ತಿದ್ದವು. ಮೆತ್ತಗೆ ಅಣ್ಣನ ಕೈ ಹಿಡಿದು ಕೊಳ್ಳಲು ಹೊರಟರೆ ಟಾರ್ಚ್ ಸಿಗದ ಸಿಟ್ಟಿನಲ್ಲಿದ್ದ ಅವನು ಕೈ ಕೊಡವಿದ. ದೊಡ್ಡಮ್ಮನ ಸೀರೆಯ ಸೆರಗನ್ನೇ ಕೈಗೆ ಸುತ್ತಿಕೊಂಡೆ.ಅಂತೂ ಇಂತೂ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ  ತಲುಪಿದೆವು. 

ಪುಟ್ಟ ಊರು, ಪ್ರತಿ ಮನೆಯಿಂದಲೂ ಹಸು ಕರು,  ಬೆಕ್ಕುಗಳನ್ನು ಬಿಟ್ಟು ಮತ್ತೆಲ್ಲರೂ ಬಂದಿದ್ದರು. ಕೆಲವು ಮನೆಯವರೊಂದಿಗೆ ಬಂದ ನಾಯಿಗಳು ಹೊರಗೆ ಕಿತ್ತಾಡುತ್ತಿದ್ದವು. ಪುಂಡ ಹುಡುಗರು ಅವುಗಳಿಗೆ ಕಲ್ಲು ಹೊಡೆದು ಗದ್ದಲವೆಬ್ಬಿಸುತ್ತಿದ್ದರು. ದೊಡ್ಡಮ್ಮನ ಪರಿಚಯ ಇರುವ ಅಲ್ಲಿಯವರು ಎಲ್ಲಿಂದಲೋ ಒಂದು ಕುರ್ಚಿ ತಂದು ಹಾಕಿ, ಅವರನ್ನು ಕುಳ್ಳಿರಿಸಿದರು. ನಾನು ಮತ್ತು ಅಣ್ಣ ಅಲ್ಲೇ ಪಕ್ಕದಲ್ಲಿ ನೆಲದ ಮೇಲೆ ತಂದಿದ್ದ ಕಂಬಳಿ ಹಾಸಿ ಕುಳಿತುಕೊಂಡೆವು. ಅಕ್ಕ ಪಕ್ಕದಲ್ಲಿ ನೋಡಿದರೆ ಕೆಲವರು ಹಾಸಿಗೆ ತಲೆದಿಂಬನ್ನು ತಂದು ಹಾಕಿಕೊಂಡು ಅದನ್ನೇ ಬೆಡ್ ರೂಂ ಮಾಡಿಕೊಂಡಿದ್ದರು. ಕೆಲವು ಪುಟ್ಟ ಮಕ್ಕಳು ಆಗಲೇ ನಿದ್ದೆ ಮಾಡಿ ಆಗಿತ್ತು. ಅವರ ಅಮ್ಮಂದಿರು ಕಾಲು ಚಾಚಿ ನಿರಾಳವಾಗಿ ಕುಳಿತಿದ್ದರು. ಅಷ್ಟರಲ್ಲಿ ಮೈಕಾಸುರನ ಹಲೋ ಹಲೋ ಎಂಬ ಧ್ವನಿ ಕೇಳಿ ನಾನು ಸ್ಟೇಜಿನ ಕಡೆಗೆ ಕಣ್ಣು ನೆಟ್ಟೆ.ಏನೋ ಒಂದು ಅದ್ಭುತ ಇನ್ನು ಸ್ವಲ್ಪವೇ  ಕಾಲದಲ್ಲಿ ನನ್ನ ಕಣ್ಣೆದುರು ನಡೆಯಲಿದೆ ಎಂಬಂತೆ. ಸಭಾ ಕಾರ್ಯಕ್ರಮ ಪ್ರಾರ್ಥನೆ, ಭಾಷಣ ಎಂದೆಲ್ಲ ಶುರು ಆಯಿತು. ಭಾಷಣಕ್ಕೆನಿಂತವರು ಈ ದಿನ ಮುಗಿದ ಮೇಲೆ ಮಾತುಗಳೇ ಆಡೊಲ್ಲವೇನೋ ಎಂಬಂತೆ ಎಲ್ಲವನ್ನು ಈಗಲೇ ಹೇಳುವ ತುರಾತುರಿಯಲ್ಲಿದ್ದರು. ಅದನ್ನು ಕೇಳಿ ಕೇಳಿ ಆಕಳಿಕೆ ಬರತೊಡಗಿತು. ಅಣ್ಣ ಕುಳಿತಲ್ಲೇ ತೂಕಡಿಸುತ್ತಿದ್ದ. ಕೊನೆಗೂ ಎಲ್ಲಾ ಕಷ್ಟಗಳಿಗೂ  ಕೊನೆಯಿರುವುದು ನಿಜ ಎಂಬಂತೆ ಈಗ ಸಾಂಸ್ಕೃತಿಕ ಕಾರ್ಯಕ್ರಮಗಳು ಶುರು ಎಂದು ಹೇಳುವುದು ಕೇಳಿಸಿತು. ಕೂಡಲೇ ಅಣ್ಣನನ್ನು ತಟ್ಟಿ ಎಬ್ಬಿಸಿದೆ. ಅವನು ನಾಟಕ ಶುರು ಆಗುವಾಗ ಹೇಳು ಎಂದು ಸರಿಯಾಗಿ ಕಾಲು ಚಾಚಿ ಮಲಗಿದ. ನಾನು ಕುತ್ತಿಗೆ ಉದ್ದ ಮಾಡಿ ಸರಿಯಾಗಿ ಕುಳಿತು ಕೊಂಡೆ. ಕೆಲವು ನೃತ್ಯ ಸಂಗೀತ ಗಳೆಲ್ಲ ಮುಗಿದು ನಾಟಕ ಶುರು ಆಗುವ ಹಂತ ತಲುಪಿತು. ಅಷ್ಟರಲ್ಲಿ ದೊಡ್ಡಮ್ಮ ಕಾಲು ನೋಯುತ್ತಿದೆ. ಇನ್ನು ಕುಳಿತು ಕೊಳ್ಳಲು ಸಾಧ್ಯವೇ ಇಲ್ಲ ಎಂದು ಅಣ್ಣನನ್ನು ಎಬ್ಬಿಸಿದರು. ಅರ್ಧ ನಿದ್ದೆಯಲ್ಲಿದ್ದ ಅಣ್ಣನಿಗೂ ನಾಟಕ ನೋಡುವುದರಿಂದ ಮನೆಗೆ ಹೋಗಿ ಕಾಲು ಚಾಚಿ ಮಲಗುವುದೇ ಸುಖವೆಂದು ತೋರಿರಬೇಕು. ಅವನು ಎದ್ದು ನಿಂತ. ಆದರೆ ನಾನು ಮಾತ್ರ ಸುತಾರಾಂ ಏಳಲು ಒಪ್ಪಲಿಲ್ಲ. ನಾಟಕ ನೋಡಲು ಅಂತ ಕರೆದು ಕೊಂಡು ಬಂದು ಅದು ಶುರು  ಆಗುವ ಮೊದಲೇ ಹೊರಟರೆ ಹೇಗೆ, ನಾನು ಬರಲ್ಲ ಅಂತ ಖ್ಯಾತೆ ತೆಗೆದೆ. ದೊಡ್ಡಮ್ಮ ಮನೆಯಿಂದ ಹೊರಡುವ ಮೊದಲೇ ಆದ ಷರತ್ತಿನ ಬಗ್ಗೆ ನೆನಪಿಸಿದರು. ಆದರೆ ನನ್ನನ್ನು ಅದ್ಯಾವುದು ಕೂತಲ್ಲಿಂದ ಏಳಿಸಲು ವಿಫಲವಾಯಿತು. ನನ್ನನ್ನು ಎಲ್ಲರ ಎದುರು ಹೆಚ್ಚು ಬಯ್ಯುವುದು,ಒತ್ತಾಯ ಮಾಡುವುದು ಸಾಧ್ಯವಾಗದೆ, ಅಲ್ಲೇ ಇದ್ದ ಪರಿಚಯದವರಲ್ಲಿ ನಾಟಕ ಮುಗಿಯುವಾಗ ಎಷ್ಟು ಹೊತ್ತಾದೀತೆಂದು ವಿಚಾರಿಸಿದರು. ಹೆಚ್ಚು ಕಡಿಮೆ ಬೆಳಗ್ಗಿನ ಜಾವ ೫ ಘಂಟೆಗೆ ಮುಗಿಯಬಹುದು ಎಂಬ ಅವರ ಮಾತನ್ನು ಕೇಳಿ ದೊಡ್ಡಮ್ಮ ಅಷ್ಟು ಹೊತ್ತು ಕುಳಿತಿರುವುದು ಅಸಾಧ್ಯ ಎಂದು  ನನ್ನನ್ನು 'ಹೋಗುವ ಏಳು' ಎಂದರು.ಆಗ ನನ್ನ ಕಣ್ಣಲ್ಲಿ ನನ್ನ ಪ್ರಮುಖ ಅಸ್ತ್ರ ಗಳಾದ ಗಂಗೆ ಯಮುನೆಯರು ಪ್ರತ್ಯಕ್ಷರಾಗಿ ಬೇಡಿದ್ದನ್ನು ಕೊಡುವೆವು ಎಂದು ದುಮ್ಮಿಕ್ಕಿದರು. ಎಲ್ಲರ ಅತಿ ಪ್ರೀತಿಯ ಒಬ್ಬಳೇ ಮಗಳಾದ ನಾನು ಅಳುವುದನ್ನು ಯಾರು ಸಹಿಸುವುದಿಲ್ಲ ಎನ್ನುವುದು ನನ್ನರಿವಿಗೆ ಮೊದಲೇ ತಿಳಿದ ವಿಷಯ. ಅಣ್ಣ ಬೇಸರದಲ್ಲಿ ನೀನು ಅಳಬೇಡ ನಾಟಕ ನೋಡು ನಾನು ಬೆಳಗ್ಗೆ ಅದು ಮುಗಿಯುವ ಹೊತ್ತಿಗೆ ನಿನ್ನನ್ನು ಕರೆದು ಕೊಂಡು ಹೋಗುತ್ತೇನೆ. ಎಂದ. ದೊಡ್ಡಮ್ಮನೂ ಅದಕ್ಕೆ ಗೊಣಗಿಕೊಂಡೆ ಒಪ್ಪಿಗೆ ನೀಡಿದರು. ನನ್ನ ಕೈಯಲ್ಲಿದ್ದ ಟಾರ್ಚನ್ನು ಅಣ್ಣನ ಕೈಗೆ ನೀಡಿದೆ. ಪುನಃ ಎರಡೆರಡು ಸಲ ಬೇಗ ಬಾ ಎಂದು ಹೇಳಿದೆ. ಸರಿ ಎಂದು ತಲೆ ಆಡಿಸಿದ. ದೊಡ್ಡಮ್ಮ ತಾನು ಕುಳಿತಿದ್ದ ಕುರ್ಚಿಯ ಮೇಲೆ ನನ್ನನ್ನು ಕುಳಿತುಕೊಳ್ಳಲು ಹೇಳಿ, ಮತ್ತೆ  ನೂರು ಸಲ 'ಜಾಗ್ರತೆ, ಜಾಗ ಬಿಟ್ಟು ಹೋಗಬೇಡ. ಇಲ್ಲೆ ಇರು'. ಎಂದರು ಅದಕ್ಕೆ ಒಪ್ಪಿಕೊಂಡು ನಾನು ಕುರ್ಚಿ ಎಂಬ ಸಿಂಹಾಸನಾದೀಶಳಾದೆ.ನನ್ನೆಡೆಗೆ ನೋಡಿದ ಕೆಲವರ ನೋಟದಲ್ಲಿ ಅಸೂಯೆಯಿರುವಂತೆ  ಅನ್ನಿಸಿತು. ನಾಟಕ ಶುರು ಆದುದರಿಂದ ಅವರಿವರ ಭಾವನೆಗಳನ್ನು ಅಳೆಯುವ ಕೆಲಸ ಬಿಟ್ಟು ಜಂಭದಿಂದಲೇ ನಾಟಕ ನೋಡಲು ಪ್ರಾರಂಭಿಸಿದೆ. 

ಅರ್ಜುನನಿಗೆ ಬಾಣ ಬಿಡುವಾಗ ಮರದ ಮೇಲಿದ್ದ ಹಕ್ಕಿಯ ಕಣ್ಣು ಮಾತ್ರ ಕಂಡಂತೆ, ನನಗೆ ಸ್ಟೇಜಿನ ಮೇಲೆ ಆಗುತ್ತಿದ್ದ ನಾಟಕ ಬಿಟ್ಟು ಬಾಹ್ಯ ಲೋಕದ ಕಡೆಗೆ ಗಮನವೇ ಇರಲಿಲ್ಲ. ನಾಟಕ ಮುಗಿಯಿತು. ಅದು ಮುಗಿದ ನಂತರವೂ ಎರಡು ನೃತ್ಯ ಕಾರ್ಯಕ್ರಮ ಇದೆ ಎಂದು ಮೊದಲೇ ಹೇಳಿದ್ದರು. ಹಾಗಾಗಿ ನಾನು ಕುಳಿತೆ ಇದ್ದೆ. ಕಾರ್ಯಕ್ರಮ ನೋಡಲು ಬಂದಿದ್ದ ಮುಕ್ಕಾಲು ಪಾಲು ಜನ ಹೋಗಿದ್ದರು. ಉಳಿದವರಲ್ಲಿ ಹೆಚ್ಚಿನವರು ನಿದ್ರಾಲೋಕದಲ್ಲಿದ್ದರು. ಸುಮಾರು ಕಾಲು ಘಂಟೆ ಕಾಲ ಇಳಿ ಬಿದ್ದ ಸ್ಕ್ರೀನನ್ನೇ ವೀಕ್ಷಿಸುತ್ತಾ ಕುಳಿತಿದ್ದೆ. ಆಗ ಅದರ ಹಿಂದಿನಿಂದಲೇ ಮುಂದಿನ ನಡೆಯಬೇಕಿದ್ದ ನೃತ್ಯ ಅನಿವಾರ್ಯ ಕಾರಣಗಳಿಂದ ರದ್ದಾಗಿದೆ. ಎಂಬ ಅಶರೀರ ವಾಣಿ ಕೇಳಿಸಿತು. ಇದು ನನ್ನನ್ನು ಬೆಚ್ಚಿ ಬೀಳಿಸಿತು. ಅಲ್ಲಿವರೆಗೂ ಅಕ್ಕ ಪಕ್ಕದವರ ಕಡೆಗೆ ನೋಡದ ನಾನು ಈಗ ಅತ್ತಿತ್ತ ಕಣ್ಣು ಹಾಯಿಸಿದೆ. ನೋಡುವುದೇನು... ಯಾರೂ ಇಲ್ಲ.. ಅದ್ಯಾವ ಮಾಯದಲ್ಲಿ ಎಲ್ಲರೂ ಹೋಗಿದ್ದರೋ ನನಗೆ ತಿಳಿಯಲೇ ಇಲ್ಲ. ಕೆಲವು ಅಲ್ಲಿನ ಸಂಘಟಕರು ಮಾತ್ರ ಅತ್ತಿತ್ತ ಸುಳಿದಾಡುತ್ತಿದ್ದರು, ಇನ್ನೂ ಕುಳಿತೆ ಇದ್ದ ನನ್ನ ಕಡೆಗೊಮ್ಮೆ ಕುತೂಹಲದ ಕಣ್ಣು ಹಾಯಿಸಿ. ಹತ್ತಿರದಲ್ಲೇ ಸಾಗುತ್ತಿದ್ದ ಒಬ್ಬರ ಬಳಿ ಘಂಟೆ ಎಷ್ಟಾಯಿತು ಎಂದರೆ ಮೂರೂವರೆ ಎಂದರು.ಅಣ್ಣ ಬರಲು ಇನ್ನು ಒಂದೂವರೆ ಘಂಟೆ ಇದೆ. ಇಲ್ಲಿ ನೋಡಿದರೆ ಒಬ್ಬರ ಸುಳಿವಿಲ್ಲ . ಅಷ್ಟು ಹೊತ್ತು ಕುಳಿತಿರುವುದು ಹೇಗೆಂಬ ಚಿಂತೆ ಕಾಡತೊಡಗಿತು. ಒಮ್ಮೆ ಎದ್ದು ನಮ್ಮ ಮನೆ ಕಡೆ ಹೋಗುವ ದಾರಿಯ ಕಡೆಗೆ ನೋಡಿದೆ. ಯಾರಾದರು ಆ ಕಡೆಗೆ ಹೋಗುವವರಿದ್ದಾರೆನೋ  ನೋಡಿ ಬಿಡೋಣ ಎಂದು. ಆದರೆ ಯಾರೂ ಕಣ್ಣಿಗೆ ಬೀಳಲಿಲ್ಲ. ಪುನಃ ಮೊದಲಿನ ಜಾಗದಲ್ಲೇ ಕುಳಿತಿರೋಣ ಎಂದು ಒಳಗೆ ಬಂದರೆ  ನಾನು ಕುಳಿತಿದ್ದ ಕುರ್ಚಿಯನ್ನು ಆಗಲೇ ಮಡಿಚಿ ಎತ್ತಲೋ ಒಯ್ದಿದ್ದರು. ನೆಲದಲ್ಲಿ ಒಬ್ಬಳೇ ಕುಳಿತು ಕೊಳ್ಳಲು ನಾಚಿಕೆ ಎನಿಸಿತು. ಯಾರೋ ಒಬ್ಬರು ನನ್ನ ಕಡೆ ನೋಡಿದವರು, ನನ್ನ  ಚಡಪಡಿಕೆಯನ್ನು  ಗಮನಿಸಿ, ಯಾವ ಮನೆಯವರು ಎಂದು ವಿಚಾರಿಸಿದರು. ದೊಡ್ಡಪ್ಪನ ಹೆಸರು ಹೇಳಿದೆ. ಕೂಡಲೇ ಅವರು ' ನೋಡು ಈಗ ನಿಮ್ಮ ಮನೆ ಕಡೆಯಿಂದಲೇ ಹೋಗುವ ಕೆಲವು ಜನರು ಹೋದರು. ಸ್ವಲ್ಪ ಬೇಗ ಹೋದರೆ ಸಿಗುತ್ತಾರೆ ಎಂದರು. ಇಲ್ಲೆ ಕುಳಿತು ಎಲ್ಲರ ಪ್ರಶ್ನೆಗಳಿಗೆ ಆಹಾರವಾಗುವ ಬದಲು ಹೋಗುವುದೇ ಉತ್ತಮ ಎಂದು ತೋರಿತು. 


ಹೊರಗಿನ ರಸ್ತೆಗೆ ಇಲ್ಲಿನ  ಬೆಳಕು ಬೀಳುತ್ತಿತ್ತು. ಅಲ್ಲಿವರೆಗೆ ಬೇಗನೆ ನಡೆದೆ. ಮತ್ತೆ ಮುಂದಿನ ಕತ್ತಲೆಗೆ ಕಣ್ಣು ಹೊಂದಿ ಕೊಳ್ಳಬೇಕಾದರೆ ಕೆಲ ಹೊತ್ತು ಹಿಡಿಯಿತು. ಕಂಡಷ್ಟು ದೂರಕ್ಕೆ ಕಣ್ಣು ಹಾಯಿಸಿದರೂ ಯಾರೂ ಕಾಣಲಿಲ್ಲ. ಸ್ವಲ್ಪ ದೂರ ವೇಗವಾಗಿ ಓಡಿದೆ. ಉಹುಂ ..! ಒಂದೇ ಒಂದು ಮನುಷ್ಯರ ಸುಳಿವಿರದ ನಿರ್ಜನ ರಸ್ತೆ. ನಾನೊಬ್ಬಳೆ ಅಲ್ಲಿ. ಕನಸಲ್ಲೂ ಇಂತಹ ಸನ್ನಿವೇಶ ಬಂದರೆ ಬೆಚ್ಚಿ ಬೀಳುತ್ತಿದ್ದೆ. ಆದರೆ ಇದು ನಿಜ. ಆಗೊಮ್ಮೆ ಈಗೊಮ್ಮೆ ಕಾಡಿನ ಮೌನವನ್ನು ಕಲಕುವ ಕೀಟಗಳ ಸದ್ದು. ಮೊದಲೇ ಹೆದರಿದ್ದ ನನ್ನನ್ನು ಬವಳಿ ಬೀಳುವಂತೆ ಮಾಡುತ್ತಿತ್ತು.   ಮತ್ತೂ ನಾಲ್ಕು ಹೆಜ್ಜೆ ಮುಂದೆ  ನಡೆದಾಗ ಒಬ್ಬಂಟಿಯಾಗೆ ಮನೆಯವರೆಗೂ ನಡೆಯ ಬೇಕೆಂಬ ಸತ್ಯ ನಿಚ್ಚಳವಾಯಿತು. ಈಗ ನನ್ನ ಮತ್ತು ನನ್ನೊಳಗೆ ಮೊದಲೇ ನೆಲೆಸಿದ್ದ ಭೂತ ಪ್ರೇತಗಳೊಳಗೆ  ಯುದ್ಧ ಶುರು ಆಯಿತು.  ಅದನ್ನು ಸೋಲಿಸಲು ನಾನೇ ವ್ಯೂಹ ಸಿದ್ಧ ಮಾಡಿದೆ. ನನ್ನ ಕಾಲ ಕೆಳಗಿನ ನೆಲ ಬಿಟ್ಟು ಬೇರೇನನ್ನು ನೋಡದಂತೆ ಕಣ್ಣುಗಳಿಗೆ ಆದೇಶ  ನೀಡಿದೆ. ಕೆಲವೊಮ್ಮೆ ಕಣ್ಣು ಮುಚ್ಚಿ ನಡೆದದ್ದೂ ಆಯಿತು. ಹೇಗಿದ್ದರೂ ಅಗಲ ಮಾರ್ಗ ಬೀಳುವ ಚಿಂತೆ ಇರಲಿಲ್ಲ. ಈ ಭೂತ ಗಳೆಲ್ಲ ರಸ್ತೆಯ ನಡುವಿಗೆ ಬರಲಾರವು. ಬದಿಯಲ್ಲಿ ಇರುವ ಮರದಲ್ಲೋ ಗಿಡದಲ್ಲೋ ನೆಲೆಸಿರಬಹುದು ಎಂಬುದು ನನ್ನ ಸಿದ್ಧಾಂತವಾಗಿತ್ತು.  ಈಗ ಮುಗಿಯದಿರುವ ಮಾರ್ಗದ ಜೊತೆಗೆ ನನ್ನೊಡನೆ ಉಳಿಯದೆ ಮನೆಗೆ ಹೋದ ನನ್ನ ದೊಡ್ಡಮ್ಮ ಮತ್ತು ಅಣ್ಣನ ಮೇಲೆ ಸಿಟ್ಟು ಏರತೊಡಗಿತು. ಮನದಲ್ಲೇ ಬಯ್ಯಲು ಪ್ರಾರಂಭಿಸಿದೆ. ಜೋರಾಗಿ ಬಯ್ದರೂ ಯಾರಿಗೂ ಕೇಳಿಸದೆಂಬ ಸತ್ಯ ಅರಿವಿಗೆ ಬಂದು ಅದನ್ನೂ ಮಾಡ ತೊಡಗಿದೆ. ನಾನು ಸತ್ತರೂ ಚಿಂತೆ ಇಲ್ಲ.ತಮ್ಮ ಸುಖವೇ ಇವರಿಗೆ ಮುಖ್ಯ ಎಂಬ ತೀರ್ಮಾನಕ್ಕೂ ಬಂದೆ.ಈ ಸಿಟ್ಟು ನನ್ನ ಭಯವನ್ನು ಸ್ವಲ್ಪ ಹಿಮ್ಮೆಟ್ಟಿಸಿತು. ಎರಡು ಕಿ ಮೀ ನಷ್ಟು ದೂರ ಹೀಗೆಲ್ಲ ಮಾಡುತ್ತಲೇ ಸಾಗಿತು. ಇನ್ನೇನು ಮನೆ ಹತ್ತಿರ ಬರುತ್ತಿದೆ ಎನ್ನುವಾಗ ಸಂತಸದ ಜೊತೆಗೆ ದುಃಖ ವೂ ಸೇರಿ ಗಂಗಾ ಪ್ರವಾಹ ಕಣ್ಣಲ್ಲೂ ,ಮೂಗಲ್ಲೂ ಉಕ್ಕತೊಡಗಿತು. ಮನೆ ತಲುಪಿ ಬಾಗಿಲು ತಟ್ಟಿದರೆ ಬೇಗನೆ ಅದನ್ನಾದರೂ ತೆಗೆದರೋ..? ಅದೂ ಇಲ್ಲ..... ನಿಧಾನಕ್ಕೆ ಕಣ್ಣೊರೆಸಿಕೊಂಡು ಎದ್ದು ಬಂದ ದೊಡ್ಡಮ್ಮ ನನ್ನನ್ನು ನೋಡಿ ಅಚ್ಚರಿಯಿಂದ ವಿಶ್ವದ ಎಂಟನೆ ಅದ್ಭುತ  ನಾನೇ ಏನೋ ಎಂಬಂತೆ ನೋಡಿ ಅಯ್ಯೋ ಒಬ್ಬಳೇ ಬಂದೆಯಾ.. ಎಂದು ಮೈ ದಡವಲು ಮುಂದೆ ಬಂದರು. ಕೂಡಲೇ ಕೋಪದಿಂದ ಅವರ ಕೈ ದೂಡಿ, ಕೈ ಕಾಲು ತೊಳೆದು ಮಲಗು ಎಂಬ ದೊಡ್ಡಮ್ಮನ ನುಡಿಯನ್ನು ತೃಣಕ್ಕಿಂತ   ಕಡೆಯೆಂದು ಪರಿಗಣಿಸಿ, ಮಂಚದ ಮೇಲೆ ದೊಪ್ಪನೆ ಬಿದ್ದು ಈಗೇನು ಹೆಚ್ಚು ದುಃಖ ವಾಗದಿದ್ದರೂ, ಅವರಿಗೆ ಕೇಳುವಷ್ಟು ಜೋರಾಗಿ ಅಳ ತೊಡಗಿದೆ. ಇಲ್ಲದಿದ್ದರೆ ನನ್ನ ಸಂಕಟ ಎಲ್ಲರಿಗೂ ತಿಳಿಯುವುದಾದರೂ ಹೇಗೆ ಅಲ್ಲವೇ..? ನನ್ನ ಅಳು ನಿಲ್ಲಿಸಲು ಮನೆಯ ಎಲ್ಲಾ ಸದಸ್ಯರು ಬಂದರೂ ಜೋರಾಗುತಿತ್ತೆ ವಿನಃ ಕಡಿಮೆಯಾಗದುದನ್ನು  ಕಂಡ ದೊಡ್ಡಮ್ಮ ಅವಳು ಸ್ವಲ್ಪ ಮಲಗಲಿ ಎದ್ದ ಮೇಲೆ ಸರಿಯಾಗುತ್ತಾಳೆ ಎಂದು ಎಲ್ಲರನ್ನು ಕಳುಹಿಸಿದರು. ಎಲ್ಲರೂ ಹೋದ ಮೇಲೆ ನನ್ನ ಅಳು ಸುಮ್ಮನೆ ಅತ್ತಿನ್ನು ಪ್ರಯೋಜನವಿಲ್ಲ ಎಂದು ತನ್ನಿಂದ ತಾನೆ ಕಡಿಮೆಯಾಯಿತು. ಸ್ವಲ್ಪ ಹೊತ್ತಾದ ಮೇಲೆ ನನಗೆಲ್ಲೂ ಸಿಕ್ಕದ , ನಾನು ಕತ್ತಲೆ ಎಂದರೆ ಹೆದರಿ ಸಾಯುವಂತೆ ಮಾಡುವ ಭೂತಗಳು ನನಗೆಲ್ಲೂ ಸಿಕ್ಕದ ವಿಷಯ ನೆನಪಾಯಿತು. ಒಂದೋ ಅವು ನನ್ನನ್ನು ನೋಡಿ ಹೆದರಿರಬೇಕು ಅಥವಾ ಅಪ್ಪ ಹೇಳಿದಂತೆ ಅವು ಬರಿ ನನ್ನ ಕಲ್ಪನೆಗಳೇ ಆಗಿರಬೇಕು..ಯಾವುದು ಸರಿ ಎಂಬ ಆಲೋಚನೆಯಲ್ಲಿರುವಾಗಲೇ ನಿದ್ರೆ ತಾನಾಗೆ ಬಂದು ನನ್ನ ಮಗ್ಗುಲು ಸೇರಿತು. ಅಂದಿನಿಂದ ನನ್ನ ಕತ್ತಲ ಬಗೆಗಿನ ಭಯವೆಂಬ ಭೂತ ಓಡಿ ಹೋಯಿತು. 
 

Wednesday, December 22, 2010

ಚಕ್ರ

ಚಕ್ರ 

ಸುತ್ತುವ ಚಕ್ರದೊಳಗೊಂದು 
ಬದುಕ ಬಣ್ಣ ಹುಡುಕುವ ನೋಟ..
ಒಮ್ಮೆ ಮೇಲೇರಿದರೆ ಕ್ಷಣದಲ್ಲೇ
ಕೆಳಗಿಳಿದು ಬಳಲುವ  ತಾಕಲಾಟ 

ಏರುವಾಗಿನ ಕೇಕೆ, ಸಹಜ ನಗು 
ಇಳಿಯುವಾಗಿಲ್ಲ
ಹೊತ್ತ ಸಂಕಟದ ಜೊತೆಗೆ 
ಮಂದಿ  ಮಾತ  ಕೇಳಬೇಕಲ್ಲ 


ಏರುವಾಗೆಲ್ಲ ಉಬ್ಬಿಸಿ, ಕುಣಿದಾಡಿದವರು
ಕೆಳಗಿಳಿಯುವಾಗ ನಿಂತಿದ್ದರು, ತಪ್ಪಿಸಿ ಕಣ್ಣ ದೃಷ್ಟಿ 
ಹೊತ್ತು ತಂದಿದ್ದೇನೆ ಬದುಕ ಕಲಿಕೆಯ
ಬಂಜೆಯಾಗಳೆಂದೂ ಸೃಷ್ಟಿ 

ಏರಿಳಿತದ ನಿಜದಾರಿಯ 
ನಿತ್ಯ ದರ್ಶನವೀ ಚಕ್ರ 
ಏರಿದವನು ಇಳಿಯಲೇಬೇಕೆಂಬುದ ಒಪ್ಪಿಕೊಂಡರೆ  
ಬದುಕು ಬೇವಿನ ಜೊತೆಗಿನ ಶರ್ಕರ 
 

Wednesday, December 15, 2010

ಉಭಯ ಕುಶಲೋಪರಿ



ನಾನೆಲ್ಲಿಂದ ಬಂದೆ ಎಂದು 
ಕಳಚಿಕೊಂಡ ತೊಟ್ಟ ಕೇಳಬೇಕು 
ಒಂದಿಷ್ಟು ಹೊತ್ತು ನಿನ್ನ ಸಂಗಡ
ಇರಬೇಕೆಂದು ಬಯಸಿ ಬಂದದ್ದಲ್ಲ 
ಯಾರೋ ತೇಲಿಬಿಟ್ಟರು ..


ಈ ಬಂಧ ಬಹಳ ಹೊತ್ತಿನದಲ್ಲ ಗೆಳತೀ.. 
ಇನ್ನೊಂದು ತೆಳು ಗಾಳಿಯೂ ಬೇರ್ಪಡಿಸೀತು ..
ಚಿಂತೆ ಬಿಡು .. ಮಣ್ಣ ನಂಟೇನು ಹೊಸತೆ ..
ಅಲ್ಲೇ ಹುಟ್ಟಿದ್ದು .. ಮರಳುವಾಗ ಮಾತ್ರ ನೋವೇಕೆ 
ಬಣ್ಣ ಕಳೆದುಕೊಂಡರೂ ಬದುಕು 
ಹೊಸ ಸಸಿಗೆ ಗೊಬ್ಬರವಾಗುವ ಬಯಕೆ ..

* * ಪುಳಕ



ಹಾರಾಡುವ ಜೀವಕ್ಕೆ
ಒಮ್ಮೆ ಕಾಲೂರಿ ನಿಲ್ಲುವ ಆಸೆ
ಆಸರೆಗೆ ಯಾರಾದರೇನು .. ?
ಮುಗಿದ ಅಧ್ಯಾಯದಂತೆ
ಪುಟ ಮುಚ್ಚಿ ಮಲಗಿದ್ದ
ಸಣ್ಣ ಒಣ ಕೊರಡು 


ಚೈತನ್ಯದ ಧಾರೆಯೇ ಎರಕ ಹೊಯ್ದ
ಪುಟ್ಟ ಪಾದ
ವಿಶ್ರಾಂತಿಯ ಬೇಡಿ
ಮೃದುವಾಗಿ ಸೋಕಲು
ಸತ್ತು ಬಿದ್ದ ಮನ
ಪುಳಕಿತಗೊಂಡು
ಕ್ಷಣ ಹೊತ್ತು ಮತ್ತೆ ಬದುಕಿತು 

Monday, December 13, 2010

ಕವಿ ನಿವಾಸ

 

ರಾಷ್ಟ್ರ ಕವಿ ಕುವೆಂಪು ಅವರ ಕುಪಳ್ಳಿಯ ಮನೆಗೊಮ್ಮೆ ಭೇಟಿ ನೀಡಬೇಕೆಂಬುದು ಬಹುಕಾಲದ ಕನಸು.. ಪ್ರತಿಸಲವೂ ಕುಪ್ಪಳ್ಳಿ ಎಂಬ ನಾಮ ಪಲಕ ಕಂಡಾಗ ಆಸೆ ಗರಿಕೆದರಿದರೂ ಕೆಲಸದ ಒತ್ತಡ , ಸಮಯದ ಅಭಾವ , ಹೀಗೆ ಯಾವುದಾದರೊಂದು ಕಾರಣ ಗಳನ್ನು ಮುಂದಿಕ್ಕಿ ಹೋಗಲಾರದೆ ಉಳಿದೆ ಬಿಡುತಿತ್ತು. ಈ ಸಲವಂತೂ ಹೋಗಲೇ ಬೇಕೆಂಬ ನಿರ್ಧಾರ ಅಲ್ಲಿಗೆ ಎಳೆದೊಯ್ದಿತು. ನಾಡ ಹಂಚಿನ ಮನೆ, ಮನೆಯ ಮುಂದೆ ಸುಂದರ ಹುಲ್ಲ ಹಾಸು, ನಡು ನಡುವೆ ಹೂವಿನ ಗಿಡಗಳು, ಒಂದು ಬದಿಯಲ್ಲಿ ಪೀಠದ ಮೇಲೆ ಕುಳಿತಂತಿದ್ದ ಕವಿ ಕುವೆಂಪು ರವರ ಪುತ್ಥಳಿ ನಮ್ಮನ್ನು ಮನೆಯ ಒಳಗೆ ಬನ್ನಿ ಎಂದು ಆಹ್ವಾನಿಸುವಂತೆ ಕಾಣಿಸುತ್ತಿತ್ತು. ಸುಂದರ ಕೆತ್ತನೆಗಳ ಹೆಬ್ಬಾಗಿಲು, ಗೋಡೆಯ ಮೇಲೆ "ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೇ ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು" 
ಎಂಬ ಕವಿವಾಣಿ ಒಳಗಿನ ವೈಭವದ ಮುನ್ಸೂಚನೆ ಇತ್ತಿದ್ದವು. ಒಬ್ಬರಿಗೆ 5 ರೂ ನಂತೆ ಪ್ರವೇಶದರ ನೀಡಿ ಪ್ರವೇಶ ಪತ್ರ ಪಡೆದುಕೊಂಡು ಒಳ ಪ್ರವೇಶಿಸಿದೆವು. ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿ ಪ್ರವೇಶ ಪತ್ರವನ್ನು ಧ್ವಾರದಲ್ಲಿ ನಿಂತವರು ಹರಿದು ನಮ್ಮನ್ನು ಒಳ ಬಿಡುತ್ತಾರೆ. ಈಗಲೂ ಹಾಗೆ ಆಗುವುದೆಂಬ ಭಯದಲ್ಲಿ ಅದನ್ನು ಗಟ್ಟಿಯಾಗಿ ಹಿಡಿದು ನಿಂತಿದ್ದೆ. ಐದು ರುಪಾಯಿಯ ಟಿಕೆಟ್ ಮೇಲೆ ಅಷ್ಟ್ಯಾಕೆ ಆಸೆ ಅಂತೀರಾ ..ಕವಿ ಮನೆಯಾ ಸುಂದರ ಚಿತ್ರವನ್ನು ಹೊಂದಿದ್ದ ಅದು ಎರಡೂ ಬದಿಗಳಲ್ಲಿ ಕವಿವಾಣಿಯನ್ನು ಸಾರುತಿತ್ತು.ಅದಾಗಲೇ ನಮ್ಮ ಮನೆಯ ಫೋಟೋ ಆಲ್ಬಮ್ ಒಳಗೆ ಜಾಗ ಪಡೆಯಲು ತಯಾರಿ ನಡೆಸಿತ್ತು. ಪ್ರವೇಶಿಸಿದ ಕೂಡಲೇ ನಗುಮುಖದಿನದ ನಮ್ಮನ್ನು ಬರ ಮಾಡಿಕೊಂಡು ಮನೆಯ ಒಳಗಿನ ಅಂದವನ್ನು ನಾವಾಗಿಯೇ ನೋಡಲು ಅನುವು ಮಾಡಿ ಕೊಡುತ್ತಾರೆ. ಫೋಟೋ, ವಿಡಿಯೋ ಚಿತ್ರೀಕರಣಕ್ಕೆ ಅವಕಾಶ ಇಲ್ಲದ ಅಲ್ಲಿ ಎಲ್ಲವನ್ನೂ ಕಣ್ಣುಗಳಲ್ಲೇ ತುಂಬಿಕೊಳ್ಳುವ ಆತುರವಿತ್ತು.
ಧಾನ್ಯ ಶೇಖರಿಸಿಡುವ ದೊಡ್ಡ ಗಾತ್ರದ ಮರದ ಪೆಟ್ಟಿಗೆಗಳು, ಹಳೆ ಕಾಲದ ಮರದ ಸಾಮಗ್ರಿಗಳು ಕಣ್ಣುಗಳನ್ನು ಸೆಳೆದವು. ಗೋಡೆಯಲ್ಲಿ ತೂಗಿ ಬಿದ್ದಿದ್ದ ಕುವೆಂಪುರವರ ಕೋಟು, ಬದಿಯಲ್ಲಿದ್ದ ಊರುಗೋಲು ಕುವೆಂಪುರವರು ಈಗಷ್ಟೇ ಒಳ ಹೋಗಿದ್ದಾರೆನೋ ಎಂಬ ಭ್ರಮೆ ಮೂಡಿಸಿತು.ಸುಂದರ ಕೆತ್ತನೆಯ ಕಂಬಗಳು, ನಾಜೂಕಿನ ಕುಸುರಿಯ ಬಾಗಿಲು, ಒಂದಿಷ್ಟು ಹೊತ್ತು ನಮ್ಮನ್ನು ಅಲ್ಲಿಯೇ ಹಿಡಿದು ನಿಲ್ಲಿಸಿತು. ಒಳ ಭಾಗಕ್ಕೆ ಬಂದರೆ ಅಲ್ಲಿಯೂ ಹಳೆಕಾಲದ ಮರದ ಸಾಮಗ್ರಿಗಳನ್ನು ಅಂದವಾಗಿ ಜೋಡಿಸಿಟ್ಟಿದ್ದರು. ಅಲ್ಲಿದ್ದ ಮರದ ಏಣಿಯನ್ನೇರಿ ಮೇಲಿನ ಮಹಡಿಗೆ ಬಂದರೆ ಅಲ್ಲಿ ಕುವೆಂಪುರವರು ಪಡೆದ ಪ್ರಶಸ್ತಿಗಳು, ಅವರ ಅಮೂಲ್ಯ ಗ್ರಂಥಗಳು,ಅವರ ಬಗೆಗೆ ಬೇರೆ ಲೇಖಕರು ಬರೆದ ಪುಸ್ತಕಗಳು ಕಂಡು ಬಂದವು.ಗೋಡೆಯಲ್ಲಿ ಅಳವಡಿಸಿದ್ದ ಸ್ಪೀಕರ್ ನಲ್ಲಿ ಮೆಲುದನಿಯಲ್ಲಿ ಕೇಳಿ ಬರುತ್ತಿದ್ದ ಕುವೆಂಪುರವರ ಗೀತೆಗಳು ನಮ್ಮನ್ನು ಮೌನವಾಗಿರಲು ಒತ್ತಾಯಿಸುತಿತ್ತು. ಅಲ್ಲಿಂದಲೂ ಮೇಲಿನ ಮಹಡಿಯಲ್ಲಿರುವ ಕೋಣೆಯಲ್ಲಿ ಕುವೆಂಪುರವರು ಬಳಸುತ್ತಿದ್ದ ಮೇಜು ಕುರ್ಚಿಗಳು ಕವಿಗಾಗಿ ಕಾದು ಮೂಕವಾಗಿ ಕುಳಿತಿದ್ದವು. ಕಿಟಕಿಯಿಂದ ಹೊರಗಿಣುಕಿದರೆ ಕುಂದಾದ್ರಿಯ ರಮಣೀಯ ನೋಟ..
ಪ್ರವಾಸಿಗಳು ಅಧಿಕ ಸಂಖ್ಯೆಯಲ್ಲಿದ್ದರೂ ಮೌನವೇ ಮಾತಾಗಿತ್ತು. ಸಿಬ್ಭಂದಿಗಳು ಅಗತ್ಯ ಬಿದ್ದಲ್ಲಿ ಮೆಲುದನಿಯಲ್ಲಿ ವಿವರಿಸುತ್ತಿದ್ದರು. ಅವರ ಆತ್ಮೀಯತೆ, ಸ್ವಚ್ಚತೆಯ ಬಗೆಗಿನ ಕಾಳಜಿ ಮನಸ್ಸಿಗೆ ಮುದ ನೀಡಿದವು. ಇಲ್ಲಿ ಕುವೆಂಪುರವರ ಪುಸ್ತಕಗಳು ರಿಯಾಯಿತಿಯ ಬೆಲೆಯಲ್ಲಿ ದೊರೆಯುತ್ತವೆ.
ಅಲ್ಲಿಂದ ಹೊರ ಬಂದು 'ಕವಿಶೈಲ ' ದತ್ತ ಸಾಗಿದೆವು. ದೊಡ್ಡ ದೊಡ್ಡ ಬಂಡೆಗಳಿಂದ ಕೂಡಿದ ಹಸಿರು ತುಂಬಿದ ಸುಂದರ ಬೆಟ್ಟ. ಬೃಹದಾಕಾರದ ಬಂಡೆಗಳನ್ನು ಪೇರಿಸಿ ಮಾಡಿದ್ದ ರಚನೆಗಳು, ಬದಿಗಳಲ್ಲಿ ಅಮೃತ ಶಿಲಾ ಪಲಕಗಳಲ್ಲಿ ಕೊರೆದಿದ್ದ ಕುವೆಂಪುರವರ ಕವಿತೆಗಳು " ಓ ನನ್ನ ಪ್ರಿಯತಮ ಶಿಖರ ಸುಂದರನೆ"ಎಂಬ ಕವಿ ನುಡಿ ಅಲ್ಲಿಗೆ ಅನ್ವರ್ಥವಾಗಿತ್ತು. ಸುಮ್ಮನಿದ್ದರೂ ಮನ ಅದನ್ನೇ ಮೆಲುಕು ಹಾಕುತಿತ್ತು. ಅಲ್ಲಿನ ಸೂರ್ಯಾಸ್ತ ವಂತೂ ಅದ್ಭುತ ಕಾವ್ಯವೇ ಸರಿ. ಏಳುವ ಮನಸ್ಸಿಲ್ಲದಿದ್ದರೂ ಕತ್ತಲಾವರಿಸಿ ನಮ್ಮನ್ನು ಹೊರದೂಡಿತು. ಕೆಳಗಿಳಿದು ಬರುವಾಗಲೂ " ಮಿತ್ರರೇ ಮಾತಿಲ್ಲಿ ಮೈಲಿಗೆ! ಸುಮ್ಮನಿರಿ ಮೌನವೇ ಮಹತ್ತಿಲ್ಲಿ " ಎಂಬ ಕುವೆಂಪುರವರ ನುಡಿಯಂತೆ ಮನದುಂಬಿ ಬಂದು ಮಾತು ತಣ್ಣಗೆ ಮಲಗಿತ್ತು

ಹೆಜ್ಜೆ ಗುರುತು



ನೋಡು ಗೆಳೆಯಾ 
ಈಗಷ್ಟೇ ನೀನಿಟ್ಟ ಹೆಜ್ಜೆಯ ಗುರುತುಗಳೆಲ್ಲಿ ..... ?
ಕಳ್ಳ ಕಡಲು ಕದ್ದು ಬಿಟ್ಟಿತೇ ..... ? 
ಮತ್ತೆ ಮತ್ತೆ ತನ್ನೊಳ ಹೊಕ್ಕು ಅದನ್ನೊಮ್ಮೆ 
ಕಣ್ತುಂಬ ನೋಡಿ ಬಚ್ಚಿಟ್ಟು ಬರುವ
ರಭಸದಲೆಗಳು ಕಾಣಿಸದೆ ನಿನಗೆ.. ?
ಯಾವುದನ್ನೂ ಒಡಲೊಳಗೆ ಉಳಿಸಿಕೊಳ್ಳದೆ
ಮರಳಿ ತೀರಕ್ಕೆಸೆದು ಬಿಡುವ ಕಡಲು 
ನಿನ್ನ ಹೆಜ್ಜೆ ಗುರುತುಗಳನ್ನು ನನಗೆ ತಂದು ಕೊಡಬಹುದೇ .... ?

ಕರಿ ಬೇವಿನ ಸೊಪ್ಪು




"ಅಕ್ಕಾ...ಈ ಅತ್ತೆ ಯಾವಾಗಲು ನಿಧಾನ ಸ್ವಲ್ಪ ಬೇಗ ಎದ್ದು ಹೊರಡ್ಬಾರ್ದಾ.. ನನಗಂತೂ ಹೇಳಿ ಹೇಳಿ ಸಾಕಾಯ್ತು ಇನ್ನು ತಡ ಆಯ್ತು ಅಂತ ಅಣ್ಣನ ಕೈಯಲ್ಲಿ ನಾವು ಬಯ್ಸಿಕೊಳ್ಬೇಕು" ನಿಮ್ಮಿ ಹೇಳ್ತಾ ಇರೋ ಮಾತೆಲ್ಲ ನನ್ನ ಕಿವಿಗೆ ಬೀಳ್ತಾ ಇತ್ತು.ನಾನಾದರು ಏನು ಮಾಡ್ಲಿ ಪ್ರತಿಯೊಂದನ್ನೂ ಈ ಮಕ್ಕಳಿಗೆ ಕೈಯಲ್ಲಿ ಹಿಡಿಸಿ ಕೊಟ್ಟೆ ಆಗ್ಬೇಕು.ಹುಂ ಮಕ್ಕಳು .. ನನಗಿನ್ನೂ ಇವರು ಪುಟ್ಟ ಮಕ್ಕಳೇ ಆದ್ರೆ ಅವರಾಗಲೇ ರೆಕ್ಕೆ ಬಲಿತು ಹಾರಿ ಬೇರೆ ಗೂಡು ಸೇರಿ ಆಗಿತ್ತು. ಗಂಡ ಬಿಟ್ಟವಳೆಂಬ ಕಳಂಕ ಹೊತ್ತೇ ಪುನ ತವರು ಮನೆಯ ಕಡೆ ಕಾಲಿರಿಸಿದ್ದು. ನಾನಾದರು ಏನು ಮಾಡುವಳಿದ್ದೆ.ನಿಮ್ಮ ಕೆಲಸದವಳಾಗಿಯಾದರು ಇರ್ತೀನಿ,  ನನ್ನ ಹೊರ ಹಾಕಬೇಡಿ ಎಂದು ಕಾಲು ಹಿಡಿದು ಕೇಳಿ ಕೊಂಡಿದ್ದರೂ ಮಕ್ಕಳನ್ನು ಹೆರದ ಬಂಜೆ ಎಂಬ ಪಟ್ಟ ಕಟ್ಟಿ ಹೊರ ತಳ್ಳಿ ಕೈ ತೊಳುದು ಕೊಂಡಿದ್ದ ಗಂಡನ ಮನೆಯವರು. ಒಡ ಹುಟ್ಟಿದ ಅಣ್ಣ ಕಹಿ ಗುಳಿಗೆ ನುಂಗಿದ ಮುಖ ಮಾಡಿಕೊಂಡೆ ಬರ ಮಾಡಿಕೊಂಡಿದ್ದ. ಆದರೆ ಅತ್ತಿಗೆ ಒಂದು ದಿನವೂ ನನ್ನ ಬಗ್ಗೆ ಕೆಟ್ಟದಾಗಿ ನಡೆದು ಕೊಂಡಿರಲಿಲ್ಲ. ಆದರೆ ದೇವರಿಗ್ಯಾಕೆ ಒಳ್ಳೆಯವರೆಂದರೆ ಪ್ರೀತಿಯೋ ಬೇಗನೆ ತನ್ನ ಬಳಿ ಕರೆಸಿ ಕೊಂಡಿದ್ದ. ಮೂರು ಪುಟ್ಟ ಮಕ್ಕಳು. ನನ್ನ ಮಡಿಲಿಗೆ ಬಂದಿದ್ದವು. ನಾನು ಹೆರದಿದ್ದರೂ ತಾಯಿಯಾಗಿದ್ದೆ. ಅಣ್ಣನೂ ನನ್ನ ಬಗ್ಗೆ ಪ್ರೀತಿ ತೋರದಿದ್ದರೂ ಅಸಹನೆ ಕಾರುವುದನ್ನು ಬಿಟ್ಟಿದ್ದ.  ಮಕ್ಕಳ ಮೇಲೆ ತಾನೆಷ್ಟು ಒಲವು ತೋರಿದರೂ ಅವರ ತಂದೆಯ ಬಳಿ ಇರುವ ಸಲಿಗೆ ನನ್ನ ಬಳಿ ಇರಲೇ ಇಲ್ಲ. ನಾನು ಅದನ್ನು ಬಯಸಲೂ ಇಲ್ಲ. ಮದುವೆ ಮುಂಚಿನ ನನ್ನದೆ ಮನೆಯಲೀ ನಾನು ಹೊರಗಿನವಳಾಗೆ ಜೀವನ ನಡೆಸುತ್ತಿದ್ದೆ. 

ಹೆಣ್ಣು ಹುಡುಗಿಯರಿಬ್ಬರಿಗೂ ಮದುವೆ ಆಗಿತ್ತು. ಒಳ್ಳೆಯ ಮನೆಯನ್ನೇ ಸೇರಿದ್ದರು.ಅವರ ಬಾಣಂತನದ ಸಂಭ್ರಮವೂ ನನ್ನಿಂದಲೇ ನಡೆದಿತ್ತು.  ಇಂದು ಸಂತೋಷನ ಮದುವೆ. ಮದುವೆ ಛತ್ರಕ್ಕೆ ಹೊರಡುವ ಸಡಗರ.  ಹೊರಗಿನಿಂದ "ಅತ್ತೇ"   ಎಂಬ ನಿಮ್ಮಿಯ ಸ್ವರ ಕೇಳಿದಾಗಲೇ ಇಹಲೋಕಕ್ಕಿಳಿದದ್ದು. ಒಂದು ಸೀರೆ ಉಡುವಷ್ಟು ಹೊತ್ತು ಎಡೆ ಕೊಡದ ಇವಳು, 'ಬರುವುದಿಲ್ಲ ನೀವೇ ಹೋಗಿ, ನಾನು ಮನೆಯಲ್ಲಿದ್ದೆ ಇಲ್ಲಿನ ಕೆಲಸ ಮಾಡಿಸುತ್ತೇನೆ' ಎಂದರೆ ಅದಕ್ಕೂ ಒಪ್ಪದೇ "ಸಾಕು ನೀವು ಕೆಲಸ ಮಾಡಿಸೋದು. ಸುಮ್ಮನೆ ಹೇಳಿದಷ್ಟು  ಕೇಳಿ " ಎಂದಿದ್ದಳು.  ದಾರಿಯುದ್ದಕ್ಕೂ ನನ್ನನ್ನು ಬಯ್ಯುತ್ತಲೇ   ಇದ್ದ ಅವಳ ಮಾತು ಕಿವಿಗೆ ಬೀಳಲೇ ಇಲ್ಲ ಎನ್ನುವಂತೆ ಕಾರಿನಿಂದ ಹೊರಗೆ ದೃಷ್ಟಿ ಹಾಯಿಸಿದೆ.

 ಮದುವೆ ಹಾಲ್ ಸಿಂಗಾರ ಗೊಂಡಿತ್ತು. ಹುಡುಗನ ಕಡೆಯವರಾದ ನಮ್ಮನ್ನು ಹಾರ್ದಿಕವಾಗಿ ಬರ ಮಾಡಿಕೊಂಡು ಸತ್ಕಾರ ನಡೆಸಿದರು. ನಿಮ್ಮಿ , ವಿನುತ ಆಗಲೇ ಗಂಡಿನ ಕಡೆಯವರಿಗೆ  ಮೀಸಲಿಟ್ಟ ಕೋಣೆ ಸೇರಿ ಆಗಿತ್ತು. ನಾನು ಪುನಃ ಸೀರೆ ಉಡುವ ಕೆಲಸ ಇಲ್ಲದಿದ್ದರೂ ಅವರ ಹಿಂದೆಯೇ ನಡೆದೆ."ಅಬ್ಬ ಜೊತೆಗೆ ಬಂದಿರಲ್ಲ . ಇನ್ನು ನಿಮ್ಮನ್ನು ಹುಡುಕಿ ಕೊಂಡು ಪುನಃ ಎಲ್ಲಿ ಅಲೀಬೇಕಾಗುತ್ತೆ ಅಂದ್ಕೊಂಡೆ" ಎಂದು ನಿಮ್ಮಿ ಹೇಳಿದರೆ ವಿನುತ ಓರೆ ಮುಖ ಮಾಡಿ ನಕ್ಕಳು. ನಾನೇನಪ್ಪ ಇಲ್ಲಿಗೆ ಬರಲೇ ಬೇಕಾದ್ದು  ಎಂದು ಪ್ರಶ್ನಾರ್ಥಕ ಚಿನ್ಹೆ ಮಾಡಿ ಅವರೆಡೆಗೆ ನೋಡಿದರೆ, "ಮುಹೂರ್ತದ ಹೊತ್ತಿಗೆ ನೀವು ಇಲ್ಲೆ ಇರಿ ಹೊರಗೆ ಬರಬೇಡಿ. ಇಲ್ಲಿರುವ ನಮ್ಮ ಸಾಮಾನು ಸೀರೆ ಒಡವೆ ಎಲ್ಲಾ ಜಾಗ್ರತೆ ಇರಬೇಡವೇ?" ಎಂದಳು. ನನ್ನನ್ನು ಒತ್ತಾಯಿಸಿ ಕರೆದುಕೊಂಡು ಬಂದಿದ್ದರ ಕಾರಣ ಈಗ ಗೊತ್ತಾಯಿತು." ಅಕ್ಕಾ ಸಾಂಬಾರು ತುಂಬಾ ರುಚಿಯಾಗಿತ್ತಲ್ವೇನೆ? ಆದ್ರೆ ಅಷ್ಟೊಂದು ಕರಿ ಬೇವಿನ ಸೊಪ್ಪು ಯಾಕೆ ಹಾಕಿದ್ರೋ. ಪಕ್ಕಕ್ಕಿಡೋದೇ ಕೆಲಸ ಆಯ್ತು".  "ಹೂಂ ಕಣೆ" ...  ಎಂದ   ವಿನುತ ನನ್ನನ್ನು ಸರಿಸಿಕೊಂಡೆ ಹೊರಗಡಿಯಿಟ್ಟಳು. 

ಈ ಸಂಸಾರಕ್ಕೆ ನನ್ನ ಅಗತ್ಯ ಇದೆಯೆ? ಇಲ್ಲವೆ? ನಾನು ಒಬ್ಬಳು ಭಾವನೆಗಳಿರುವ ಮನುಷ್ಯಳು ಅಂತ ಯಾಕೆ ಇವರಿಗೆ ಅನ್ನಿಸೋದೇ ಇಲ್ಲ. ನಾನೇ ಎತ್ತಿ ಆಡಿಸಿದ ಅಣ್ಣನ ಮಗನ ಮದುವೆ ನೋಡುವ ಬಯಕೆ ನನ್ನಲ್ಲೂ ಇಲ್ಲವೆ?ಇದ್ದು ಇಲ್ಲದಂತಿರುವ ನನ್ನ ಬದುಕಿಗೂ  ಮತ್ತು ಸಾಂಬಾರಿನೊಳಗೆ ಬೆರೆತೂ, ತುತ್ತಿನೊಡನೆ ಬಾಯಿಗೆ ಸಿಕ್ಕಿದರೆ ಕಸದಂತೆ ಹೀನಾಯಿಸಿ   ಬದಿಯಲ್ಲಿಡುವ ಕರಿ ಬೇವಿನ ಸೊಪ್ಪಿಗೂ  ಸಾಮ್ಯತೆ ಇದೆಯೆಂದು ನನಗಾಗಲೇ ಅನಿಸಿದ್ದು . ..
  



ಕನ್ನಡಕ ಪುರಾಣ


 ಚಿಕ್ಕವಳಾಗಿದ್ದಾಗಿನಿಂದ  ನನಗೆ ಅತ್ಯಂತ ಕುತೂಹಲದ ಮತ್ತು ನನ್ನ ಕೈಗೆ ಸದಾ ನಿಲುಕದಷ್ಟು ಎತ್ತರದಲ್ಲಿರುತ್ತಿದ್ದ ವಸ್ತು ಎಂದರೆ ಅಜ್ಜನ ಕನ್ನಡಕ. ಕೇವಲ ಪೇಪರ್ ಓದಲು ಮಾತ್ರ ಬಳಸಲ್ಪಡುತ್ತಿದ್ದ ಅದು  ಕೂಡಲೇ  ಕನ್ನಡಕದ ಗೂಡು ಎಂಬ ಗೂಡಿನ ಬಾಗಿಲೆಳೆದುಕೊಂಡು ನನ್ನ ಕಣ್ಣಿಂದ ಮರೆಯಾಗುತ್ತಿತ್ತು. ಆಗೊಮ್ಮೆ ಈಗೊಮ್ಮೆ ಅಜ್ಜ ಮರೆತು ಕೆಳಗಿಟ್ಟ ದಿನ ಅದನ್ನು ಕಣ್ಣಿಗೆ ಏರಿಸಿ ನಡೆಯುವ ಅನುಭವವೇ ಅದ್ಭುತ. ನೆಲ ಇನ್ನಷ್ಟು ತಗ್ಗಿನಲ್ಲಿದ್ದಂತೆ ತೋರಿ ಆ ಅಂದಾಜಿಗೆ ಕಾಲಿಡುವಾಗ ಮೊದಲೇ ನೆಲ ಕಾಲಿಗೆ ತಾಗಿ ಮುಗ್ಗರಿಸುವಂತೆ ಮಾಡುತ್ತಿತ್ತು. ಮತ್ತೊಂದು ರಜೆಗೆ ಅಜ್ಜನ ಮನೆಗೆ ಹೋದಾಗ ಅದು ಕೈ ಜಾರಿ ಬಿದ್ದು ಅದರ ಕನ್ನಡಿ ಹುಡಿಯಾಗಿತ್ತು.ಹೊಸದರ ಅಗತ್ಯವಿಲ್ಲ ಎಂದು ಅಜ್ಜ ಅದರ ಫ್ರೇಮ್ ತೆಗೆದಿರಿಸಿದ್ದರು. ಅದಕ್ಕೆ ಪಾರದರ್ಶಕ ಪ್ಲಾಸ್ಟಿಕ್ ಅಂಟಿಸಿ ಕುಣಿದದ್ದೇ ಕುಣಿದದ್ದು . ಆದರೂ ಅದು ಎತ್ತರ ತಗ್ಗಿನಲ್ಲಿ ನಡೆದಾಡುವ ಅನುಭವ ನೀಡದೆ ಬೇಗನೆ ಬೇಸರ ತರಿಸಿತು. 
 ನಂತರ ಶಾಲೆಗೆ  ಹೋಗುವ ದಿನಗಳಲ್ಲಿ, ಅಂದರೆ ಅದೂ ಹೈಸ್ಕೂಲಿನ ಮೆಟ್ಟಿಲೇರಿದ ಮೇಲೆ ಕೇವಲ ಉಪಾಧ್ಯಾಯರ ಮೂಗಿನ ಮೇಲೆ ರಾರಾಜಿಸುತ್ತಿದ್ದ ಕನ್ನಡಕ, ತಲೆ ನೋವಿನ ಕಾರಣಕ್ಕೆ ಹುಡುಗಿಯೊಬ್ಬಳ ಮೂಗನ್ನು ಅಲಂಕರಿಸಿತು. ಬೇರೆಯ ತರಗತಿಯ ಹುಡುಗಿಯಾಗಿದ್ದರೂ ನಾನಾಗಿ ಮೇಲೆ ಬಿದ್ದು ಅವಳ  ಸ್ನೇಹ ಗಳಿಸಿಕೊಂಡಿದ್ದೆ. ಅವಳು ಕನ್ನಡಕ ಏರಿಸಿದಾಗ ಅದರೊಳಗೆ  ಮಿಣುಗುಟ್ಟುವ ಕಣ್ಣುಗಳ ಸೌಂಧರ್ಯ, ಅದನ್ನು ಹಾಕಿಕೊಂಡಾಗಿನ ಗತ್ತು, ಗೈರತ್ತು ಬೇರೆಲ್ಲಿತ್ತು..?ಆ ಹಾಳು ತಲೆನೋವು ನನಗಾದರೂ ಬರಬಾರದೇ ಎಂದು ಇದ್ದಬದ್ದ ದೇವರನ್ನೆಲ್ಲ ಬೇಡಿಕೊಂಡಿದ್ದೆ. ಆದರೆ ದೇವರಿಗೆ ಕಿವಿ ನೋವಿತ್ತೇನೋ .. ನನ್ನ ಮೊರೆ ಕೇಳಿಸಲೇ ಇಲ್ಲ. 
ಆಗ ನೋಡಿ! ನನ್ನಾಸೆ ಬಳ್ಳಿಗೆ  ನೀರೆರೆಯಲು ಕಾಲಿಟ್ಟಿತ್ತು  ಕೆಂಗಣ್ಣು. ಮದ್ರಾಸ್ ಐ ಎಂಬ ನಾಮದೇಯ ಹೊತ್ತಿದ್ದರೂ, ಕನ್ನಡ ಪ್ರಿಯೆಯಾದ ನಾನು ಅದನ್ನು ಕ್ಷಮಿಸಿ ಸ್ವಾಗತಿಸುವ ತಯಾರಿ  ನಡೆಸಿದ್ದೆ. ಊರಿಗೆ ಬಂದವಳು, ನೀರಿಗೆ ಬಾರದಿದ್ದಾಳೆ ..? ಎಂಬ ನುಡಿಯ ಮೇಲೆ ನಂಬಿಕೆ ಇಟ್ಟು. ಆದರೆ ಇಡೀ ಊರಲ್ಲಿ ಎಲ್ಲರಿಗೂ ಬಂದರೂ, ನನಗೆ ಬಾರದ ಆ ಕಾಯಿಲೆ,  ಅದರ ಸಂಕ್ರಾಮಿಕತೆಯೇ ಬಗ್ಗೆ ನನ್ನಲ್ಲಿ  ಅನುಮಾನ ಹುಟ್ಟಿಸಿತು . ಕಪ್ಪು ಕನ್ನಡಕದಾರಿಗಳಾಗಿ ಸುಂದರಿಯರಾಗಿ ಕಾಣಿಸುತ್ತಿದ್ದ ನನ್ನ ಅನೇಕ ಗೆಳತಿಯರು ನನ್ನಲ್ಲಿ ಅಸೂಯೆ ಹೆಚ್ಚಿಸಿದ್ದು ಸುಳ್ಳಲ್ಲ. ಅಂತೂ ಇಂತೂ ನನ್ನ ಮೇಲೆ ಕರುಣೆ ತೋರದ ಆ ಪಾಪಿ ಕಾಯಿಲೆ ಊರಿಂದ ಕಾಲ್ಕಿತ್ತಿತು.
ಕಾಲೇಜಿನ ದಿನಗಳು  ನಮ್ಮೆಲ್ಲ ಅಲಂಕಾರಕ್ಕೆ ಅಡ್ದಿ ಮಾಡದ ಕಾಲವೆಂದೇ ತಾನೇ ಪ್ರಸಿದ್ಧಿ ..! 'ಸ್ಪೋರ್ಟ್ಸ್ ಡೆ' ಎಂಬ ಒಂದು ದಿನವನ್ನು ನನ್ನ ಆಸೆ ತೀರಿಸುವ ದಿನವಾಗಿ ಆಯ್ಕೆ ಮಾಡಿದೆ. ತಂಪು ಕನ್ನಡಕ ಕಣ್ಣಿಗೇರಿಸಿ ನೂರಾರು ಬಾರಿ ಕನ್ನಡಿಯ ಮುಂದೆ ಸುಳಿದು ನನ್ನ ಅಂದಕ್ಕೆ ನಾನೇ ಬೀಗಿ ಕಾಲೇಜಿನ ದಾರಿ ಹಿಡಿದೆ. ಒಳಗೆ ಕಾಲಿಡುವಾಗಲೇ ಪರಿಚಿತ ಪ್ರಾಧ್ಯಾಪಕರೊಬ್ಬರು ಸಿಕ್ಕಿ " ಅಯ್ಯೋ ..! ಏನಮ್ಮಾ ..! ಕಣ್ಣು ನೋವು ಬಂದಿದೆಯೇ ? ಇವತ್ಯಾಕಮ್ಮಾ ಬಂದೆ? ಹೇಗೂ ಪಾಠ ಇಲ್ಲ,  ಹೋಗು....  ಹಾಸ್ಟೆಲ್ ಗೆ ಹೋಗಿ ರೆಸ್ಟ್ ಮಾಡು...  ಅದು ಗುಣ ಆಗಲಿ, ಜೋರಾದ್ರೆ ಕಷ್ಟ, ಜೊತೆಗೆ ಎಲ್ಲರಿಗೂ ಹರಡಿ ಬಿಡುತ್ತೆ .ಎಂದೆಲ್ಲ ಜೋರಾಗಿ ಹೇಳಿ ಎಲ್ಲರ ಗಮನವನ್ನೂ ನನ್ನಡೆಗೆ ಸೆಳೆದರು. ಇದು ಬಿಸಿಲಿಗೆ  ಅಂತ ತಂಪು ಕನ್ನಡ ಹಾಕಿದ್ದು ಅಂತೆಲ್ಲ ಅವರೆದುರು ಹೇಳಲು ಸಾಧ್ಯವೇ..?ಬಂದ ದಾರಿಗೆ ಸುಂಕವಿಲ್ಲ ಎಂದುಕೊಂಡು ಮರಳಿ ಹಾಸ್ಟೆಲ್ ಹಾದಿ ಹಿಡಿದೆ. 
ಮದುವೆ ನಿಶ್ಚಯವಾದಾಗ ನನ್ನ ಪತಿಯಲ್ಲಿದ್ದ ಸ್ಕೂಟರ್ ಮೊದಲು ನನ್ನ ಕಣ್ಣಿಗೆ ಬಿತ್ತು. ಅಲ್ಲಿಂದ ಸುರುವಾಯ್ತು ನೋಡಿ ನನ್ನ ಕನಸುಗಳ ಸರಮಾಲೆ. ಎಲ್ಲರೂ ಭಾವಿ ಪತಿಯ ಬಗ್ಗೆ ಕನಸು ಕಾಣುವವರಾದರೆ, ನಾನು  ಸ್ಕೂಟರಿನಲ್ಲಿ   ಕನ್ನಡಕ ಹಾಕಿಕೊಂಡು ಹೋಗುವ ಬಗ್ಗೆ ಕನಸು ಕಾಣುತ್ತಿದ್ದೆ. ಮದುವೆ ಕಳೆದು ನಾನು ಮೊದಲ ಬಾರಿ ಪತಿಯೊಡನೆ ಸ್ಕೂಟರ್ ಏರುವ ಅಮೃತ ಗಳಿಗೆ ಸಮೀಪಿಸಿತು. ಆದರೆ ನನ್ನ  ಖಾಲಿ  ತಲೆಯ ಬಗ್ಗೆ ಅತೀವ ಕಾಳಜಿ ಹೊಂದಿದ್ದ ನನ್ನ ಪತಿರಾಯ ದಪ್ಪನೆಯ ಗ್ಲಾಸ್ ಹೊಂದಿದ್ದ ಹೆಲ್ಮೆಟನ್ನು ನನ್ನ ತಲೆಯ ಮೇಲೆರಿಸಬೇಕೆ.. !! ಹ್ಹಾ..!! ವಿಧಿಯಾಟವೇ...!! ಎಂದು ಹೆಲ್ಮೆಟ್ ನ ಮೇಲೆಯೆ ತಲೆ ತಲೆ ಬಡಿದುಕೊಂಡೆ. 
ಈಗಲೂ ನನ್ನಾಸೆ ಕುಂದಿಲ್ಲ. ಇನ್ನೇನು ಕೆಲವೇ ವರ್ಷಗಳು .. ಆಗ ಬರುವ 'ಚಾಲೀಸು'  ನನ್ನ ಕಣ್ಣಿಗೆ  ಕನ್ನಡಕ  ಏರಿಸದೆ ಇರಲಾರದು.ಆದರೆ ಇಲ್ಲೂ ಒಂದು ಭಯದ ನೆರಳಿದೆ. ಚಾಲೀಸು ಗುಣಿಸು ಎರಡರಷ್ಟು ವಯಸ್ಸಾದ ನನ್ನ ಅಜ್ಜಿ  ಕಣ್ಣಿನಿಂದ ಒಂದು ಅಡಿ ದೂರದಲ್ಲಿ ಪುಸ್ತಕ ಹಿಡಿದು ದೊಡ್ಡ ಸ್ವರದಲ್ಲಿ ಒಂದೂ ತಪ್ಪದಂತೆ ಓದುತ್ತಿದ್ದರು, ಯಾವುದೇ ಕನ್ನಡಕದ ನೆರವಿಲ್ಲದೆ. ಸಧ್ಯ ನನಗೆ ಹಾಗಾಗದೆ ಇರಲೆಂದು ಪ್ರಾರ್ಥಿಸುತ್ತಾ,ಸುಂದರ ಕನ್ನಡಕ ನನ್ನ ಮೂಗೇರುವ  ಶುಭ ಗಳಿಗೆಯನ್ನು  ಶಬರಿಯಂತೆ ಕಾಯುತ್ತ ಇದ್ದೇನೆ, ಕನ್ನಡಕ ಒರೆಸುವ ಶುಭ್ರ ಹತ್ತಿ ಬಟ್ಟೆಯನ್ನು ಕೈಯಲ್ಲಿ ಹಿಡಿದು ....

Friday, October 15, 2010

Asthamaana.. A Poem by Mr.Ram Naresh Manchi

 

Asthamaana.


ಆ.......ಸಂಜೆ
ಹೋಗಿದ್ದೆ ವಿಹಾರಕ್ಕೆಂದು
ಕಡಲ ತೀರಕ್ಕೆ ....
ಭೋರ್ಗರೆವ ಭವ್ಯ ಕಡಲು
ಮುಸ್ಸಂಜೆಯ ಹೊಂಗಿರಣ
ಮರಳ ರಾಶಿಯಂತೂ
ಚಿನ್ನದಂತೆ ಅರಶಿನ ......!!!

ಸದ್ದು ಗದ್ದಲವಲ್ಲವದು
ಮುದ್ದು ಮಕ್ಕಳ ಆಟ,ಕಿರುಚಾಟ
ಇತ್ತಿಂದತ್ತ ,ಅತ್ತಿಂದಿತ್ತ
ಸುತ್ತಿ ಸುಳಿವ, ಮನಸೆಳೆವ
ಬಣ್ಣ ಬಣ್ಣದ ಹಕ್ಕಿಗಳು ...!!!

ಹಕ್ಕಿಯೊಂದೆನ್ನ ಕಂಡು
ಕಿರುನಗೆಯ ಸೂಸಲು
ಒಹ್, ನನಗಿನ್ನೇನು ....
ಸ್ವರ್ಗಕ್ಕೆ ಒಂದೇ ಗೇಣು ....!!!

ಆ ಕಿರುನಗು
ನನಗಲ್ಲ.......
ಹಿಂದುಗಡೆ ಇದ್ದ
ಆ....... ಅವನಿಗೆ
ಎಂದು ತಿಳಿದಾಗ
ಮುಸ್ಸಂಜೆ ಕಳೆದು ಕತ್ತಲಾಯಿತು ....!!!

Sunday, October 10, 2010

ಪಾರ್ಕಿನೊಳಗೊಂದು ಕಲ್ಲು ಬೆಂಚು ! A poem by Mrs.Anitha Naresh Manchi


ಪಾರ್ಕಿನೊಳಗೊಂದು ಕಲ್ಲು ಬೆಂಚು !
by Mrs.Anitha Naresh Manchi.
 
ನಾ ಒಂಟಿಯೇನಲ್ಲ .....
ನೆನಪುಗಳಿಲ್ಲಿ ಜೊತೆಯಾಗಿ ಗರಿಬಿಚ್ಚಿದೆ..
ಇಲ್ಲೇ.... ನಲ್ಲ ನಲ್ಲೆಯರು ಒಂದಾಗಿ
ಬೆರಳುಗಳ ಹೆಣೆದು ಕಣ್ಣೊಳಗೆ ಕಣ್ಣಿಟ್ಟು
ನಸು ನಾಚಿದ್ದು.....
ಪುಟ್ಟ ಕಂದ ಮೊದಲ ಹೆಜ್ಜೆಯಿಟ್ಟು
ನಲಿದಾಗ ಕಿಲಿ ಕಿಲಿ ಗೆಜ್ಜೆಯ ಸದ್ದು ನಕ್ಕಿದ್ದು....
ವೃದ್ಧ ಜೀವಗಳು ಆಸರೆಗಾಗಿ
ನನ್ನನರಸಿದ್ದು.....
ಒಬ್ಬಂಟಿ ತಾಯಿ ನನ್ನನಪ್ಪಿ ಬಿಕ್ಕಿದ್ದು...
ಹೀಗೆ ಎಷ್ಟೋ ಕತೆಗಳಿಲ್ಲಿಯೇ ಹುಟ್ಟಿದ್ದು...
ಇನ್ನೆಷ್ಟೋ ಹೆಸರಿಲ್ಲದೆ ಮಾಯವಾಗಿದ್ದು....